ಶಿರೂರು ಭೂಕುಸಿತ | ಅರ್ಜುನ್ ಪತ್ತೆ ಕಾರ್ಯಾಚರಣೆ ಪುನಾರಂಭಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕೇರಳ ಸಿಎಂ

Update: 2024-08-04 14:10 GMT

 ಪಿಣರಾಯಿ ವಿಜಯನ್ | PC : PTI 

ಕೋಯಿಕ್ಕೋಡ್ : ಕಳೆದ ತಿಂಗಳು ಸಂಭವಿಸಿದ ಶಿರೂರು ಭೂ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿರುವ ಕೋಯಿಕ್ಕೋಡ್ ಮೂಲದ ಲಾರಿ ಚಾಲಕನ ಪತ್ತೆ ಕಾರ್ಯಾಚರಣೆಯನ್ನು ಪುನಾರಂಭಿಸುವಂತೆ ರವಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸ್ಥಗಿತಗೊಂಡಿದ್ದ ಪತ್ತೆ ಕಾರ್ಯಾಚರಣೆಯು ರವಿವಾರ ಪುನಾರಂಭಗೊಳ್ಳಬೇಕಿತ್ತು. ಆದರೆ, ಅದು ಆಗಿಲ್ಲ ಎಂಬುದರತ್ತ ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ ಸಿದ್ದರಾಮಯ್ಯನವರ ಗಮನ ಸೆಳೆದಿದ್ದಾರೆ.

“ದೀರ್ಘಕಾಲದಿಂದ ನಾಪತ್ತೆಯಾಗಿರುವ ಅರ್ಜುನ್ ಕುಟುಂಬದ ಸದಸ್ಯರ ಆತಂಕ ಹಾಗೂ ದುಃಖವನ್ನು ಹಂಚಿಕೊಳ್ಳಲು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಇಂದು ಅರ್ಜುನ್ ಪತ್ತೆ ಕಾರ್ಯಾಚರಣೆಯು ಪುನಾರಂಭಗೊಳ್ಳಬೇಕಿತ್ತು ಎಂದು ನನಗೆ ತಿಳಿದು ಬಂದಿದೆ. ಆದರೆ, ಇಂದು ಪತ್ತೆ ಕಾರ್ಯಾಚರಣೆಯು ಪುನಾರಂಭಗೊಂಡಿಲ್ಲ ಎಂಬ ಮಾಹಿತಿಯು ನನ್ನನ್ನು ತಲುಪಿದೆ” ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಪತ್ತೆ ಕಾರ್ಯಾಚರಣೆಯ ಪುನಾರಂಭದಲ್ಲಿ ಸಿದ್ದರಾಮಯ್ಯನವರು ಇಂದೇ ಖುದ್ದಾಗಿ ಮಧ್ಯಪ್ರವೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ, ರವಿವಾರ ಬೆಳಗ್ಗೆ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಅವರ ಕುಟುಂಬದ ಸದಸ್ಯರನ್ನು ಭೇಟಿಯಾದ ಪಿಣರಾಯಿ ವಿಜಯನ್, ಅವರೊಂದಿಗೆ ಮಾತುಕತೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News