ಮಧ್ಯಪ್ರದೇಶ| ಕಿರುಕುಳದ ದೂರು ನೀಡಿದ್ದ ಯುವತಿಗೆ ಬೆಂಕಿ ಹಚ್ಚಿದ ಆರೋಪಿಯ ಪುತ್ರ: ಗಾಯಾಳು ಯುವತಿ ಮೃತ್ಯು

Update: 2024-10-18 15:54 GMT

ಸಾಂದರ್ಭಿಕ ಚಿತ್ರ 

ಇಂದೋರ್: ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಆರೋಪಿಯ ಪುತ್ರನು ಬೆಂಕಿ ಹಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ 19 ವರ್ಷದ ಯುವತಿಯು ಮೃತಪಟ್ಟಿದ್ದಾಳೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ರಾಯ್, ಸಂತ್ರಸ್ತ ಯುವತಿಯು ಗುರುವಾರ ತಡರಾತ್ರಿ ಇಂದೋರ್ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.

ಮೃತ ಯುವತಿಯ ಮೇಲೆ ಪೆಟ್ರೋಲ್ ಸುರಿದಿದ್ದ ಆರೋಪಿ ಅರ್ಜುನ್ ಬಲಾಯಿ (22), ಆಕೆಗೆ ಬೆಂಕಿ ಹಚ್ಚಿದ್ದ ಎಂದು ಅವರು ಹೇಳಿದ್ದಾರೆ.

ಅರ್ಜುನ್ ತನಗೆ ಆತನ ತಂದೆಯ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಮೃತ ಯುವತಿ ಆರೋಪಿಸಿದ್ದಳು. ಇದರ ಬೆನ್ನಿಗೇ ಅರ್ಜುನ್ ತಂದೆ ಮಂಗಿಲಾಲ್ ಬಲಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅರ್ಜುನ್ ಮಹಿಳೆಯ ಮೇಲೆ ದಾಳಿ ನಡೆಸಿದ ನಂತರ, ಆತನ ವಿರುದ್ಧ ಹತ್ಯಾ ಪ್ರಯತ್ನದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು ಎಂದು ರಾಯ್ ಹೇಳಿದ್ದಾರೆ.

ಇದೀಗ ಅರ್ಜುನ್ ವಿರುದ್ಧ ಎಫ್‌ಐಆರ್‌ ನಲ್ಲಿ ಹತ್ಯೆಯ ಆರೋಪವನ್ನೂ ಸೇರ್ಪಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಅಕ್ಟೋಬರ್ 7ರಂದು ಮೃತ ಯುವತಿಗೆ ಮಂಗಿಲಾಲ್ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಲೈಂಗಿಕ ಕಿರುಕುಳ ಆರೋಪದ ಮೇಲೆ ಮಂಗಿಲಾಲ್ ನನ್ನು ಬಂಧಿಸಿದ ಮರುದಿನ, ಅಕ್ಟೋಬರ್ 8ರಂದು ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News