ಮಧ್ಯಪ್ರದೇಶ | ಅಂಧ ಬಾಲಕಿಯನ್ನು ಬೆದರಿಸಿ ಅತ್ಯಾಚಾರವೆಸಗಿದ ದೇವಸ್ಥಾನದ ಅರ್ಚಕ!

Update: 2024-10-22 13:24 GMT

ಸಾಂದರ್ಭಿಕ ಚಿತ್ರ

ಭೋಪಾಲ್: ಅಂಧ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಅರ್ಚಕನೊಬ್ಬ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.

ಅಂಧ ಬಾಲಕಿಯನ್ನು ಬೆದರಿಸಿ ಅರ್ಚಕ ಅತ್ಯಾಚಾರವೆಸಗಿದ್ದ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳೆಕಿಗೆ ಬಂದಿದೆ. ಕೂಡಲೇ ಆರೋಪಿ ಅರ್ಚಕ ತಲೆಮರೆಸಿಕೊಂಡಿದ್ದಾನೆ. ಈ ಘಟನೆಯು ದೇವಾಲಯದ ಆವರಣದೊಳಗೇ ನಡೆದಿದೆ ಎಂದು ಹೇಳಲಾಗಿದೆ.

ಸಂತ್ರಸ್ತ ಬಾಲಕಿಯು ಗರ್ಭಿಣಿಯಾದ ನಂತರ, ಆಕೆಯ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ಆರೋಪಿ ಅರ್ಚಕನು ತನ್ನನ್ನು ಆಧ್ಯಾತ್ಮಿಕ ನಾಯಕ ಎಂದು ಬಿಂಬಿಸಿಕೊಂಡಿದ್ದು, ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಗಳಿಸಿದ್ದ ಎಂದು ಹೇಳಲಾಗಿದೆ. ದೇವಾಲಯದಲ್ಲಿ ದರ್ಬಾರ್ ನಡೆಸುತ್ತಿದ್ದ ಆರೋಪಿಯು, ಭಕ್ತಾದಿಗಳಿಗೆ ಪ್ರವಚನ ನೀಡುತ್ತಿದ್ದ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದ ಎನ್ನಲಾಗಿದೆ.

ತನ್ನ ಮೇಲಿನ ಅತ್ಯಾಚಾರ ಘಟನೆಯು ದೇವಾಲಯದ ಆವರಣದೊಳಗೇ ನಡೆಯಿತು ಎಂದು ಸಂತ್ರಸ್ತ ಬಾಲಕಿಯು ಆರೋಪಿಸಿದ್ದಾಳೆ. ಒಂದು ವೇಳೆ ಈ ಘಟನೆಯ ಕುರಿತು ಬಾಯಿ ಬಿಟ್ಟರೆ, ನಿನ್ನ ತಂದೆಯನ್ನು ಹತ್ಯೆಗೈಯ್ಯುವುದಾಗಿ ಆರೋಪಿ ಅರ್ಚಕ ಬೆದರಿಕೆ ಒಡ್ಡಿದ ಎಂದೂ ಆಕೆ ದೂರಿದ್ದಾಳೆ.

ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು, ಸಾಕ್ಷ್ಯಾಧಾರಗಳ ಸಂಗ್ರಹ ಹಾಗೂ ಬಲವಾದ ಸಾಕ್ಷಿಗಳನ್ನು ಗುರುತಿಸುವುದರಲ್ಲಿ ತೊಡಗಿದ್ದಾರೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಿರುವ ಪೊಲೀಸರು ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News