ರಾಜಸ್ಥಾನ | ಪ್ರೇಮ ವಿವಾಹ : ತಂದೆ, ಪುತ್ರನನ್ನು ಹತ್ಯೆಗೈದ ಸಂಬಂಧಿಕರು

Update: 2024-06-13 10:11 GMT

ಜೈಪುರ: ಪ್ರೇಮ ವಿವಾಹವಾದರೆಂದು ತಂದೆ ಹಾಗೂ ಪುತ್ರನನ್ನು ಅವರ ಸಂಬಂಧಿಕರೇ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲ್ವಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮ, ದಯಾಳ್ ಸಿಂಗ್ ಹಾಗೂ ಇನ್ನಿತರ ಕೆಲವು ಆರೋಪಿಗಳು ಸೂರಜ್ (50) ಹಾಗೂ ಅವರ ಪುತ್ರ ರಾಬಿನ್ (27) ಮೇಲೆ ದೊಣ್ಣೆಗಳಿಂದ ಗುರುವಾರ ಮುಂಜಾನೆ ಅವರ ನಿವಾಸದ ಎದುರು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಮೃತ ವ್ಯಕ್ತಿಗಳು ಹಾಗೂ ಆರೋಪಿಗಳು ಸಂಬಂಧಿಕರಾಗಿದ್ದು, ಅವರು ಪಂಜಾಬ್ ಮೂಲದವರಾಗಿದ್ದಾರೆ ಎಂದು ಅಲ್ವಾರ್ ಸದರ್ ನ ಠಾಣಾಧಿಕಾರಿ ಮೋಹನ್ ಲಾಲ್ ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಮೃತ ರಾಬಿನ್ ಪಂಜಾಬ್ ನ ಓರ್ವ ಯುವತಿಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಎರಡೂ ಕುಟುಂಬಗಳ ನಡುವೆ ವೈಮನಸ್ಸು ಉದ್ಭವಿಸಿತ್ತು ಎಂದು ಹೇಳಲಾಗಿದೆ.

ರಾಬಿನ್ ಪತ್ನಿಯ ಸಂಬಂಧಿಕನೂ ಆಗಿರುವ ದಯಾಳ್ ಸಿಂಗ್, ರಾಬಿನ್ ಹಾಗೂ ಆತನ ತಂದೆಯ ಮೇಲೆ ತನ್ನ ಸಹಚರರೊಂದಿಗೆ ದಾಳಿ ನಡೆಸಿದ್ದಾನೆ. ಈ ಸಂಬಂಧ ದಯಾಳ್ ಸಿಂಗ್ ಹಾಗೂ ಆತನ ಜೊತೆಗಿದ್ದ 10 ಮಂದಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಲ್ವಾರ್ ಸದರ್ ನ ಠಾಣಾಧಿಕಾರಿ ಮೋಹನ್ ಲಾಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News