ಮುಸುಕುಧಾರಿಗಳಿಂದ ಟೋಲ್‌ ಪ್ಲಾಝಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ: ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಹಾರಿದ ಇಬ್ಬರು ಸಾವು

Update: 2024-04-04 06:47 GMT

Photo: X 

ಭೋಪಾಲ್: ಮುಸುಕುಧಾರಿ ಬಂದೂಕುಧಾರಿಗಳು ಹಾರಿಸಿದ ಗುಂಡಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಾವಿಗೆ ಹಾರಿದ ಇಬ್ಬರು ಟೋಲ್ ಪ್ಲಾಝಾ ಸಿಬ್ಬಂದಿಗಳು ಬಾವಿಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದ ದಾತಿಯಾದಲ್ಲಿ ಮಂಗಳವಾರ ತಡ ರಾತ್ರಿ ನಡೆದಿದೆ.

ಸಂತ್ರಸ್ತ ಸಿಬ್ಬಂದಿಗಳನ್ನು ಹರ್ಯಾಣ ನಿವಾಸಿ ಶ್ರೀನಿವಾಸ್ ಪರಿಹಾರ್ ಹಾಗೂ ನಾಗಪುರ ನಿವಾಸಿ ಶಿವಾಜಿ ಕಂಡೆಲೆ ಎಂದು ಗುರುತಿಸಲಾಗಿದೆ. ದಾಳಿಕೋರರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಗುಂಡಿನ ದಾಳಿಯು ಟೋಲ್ ಪ್ಲಾಝಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್ ಪ್ಲಾಝಾ ಸಿಬ್ಬಂದಿಗಳು ಈ ಘಟನೆಗೆ ಯಾರನ್ನೂ ಹೆಸರಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಮಿಶ್ರಾ, “ಟೋಲ್ ಗೆ ಸಂಬಂಧಿಸಿದಂತೆ ಜಗಳವಾದ ನಂತರ ಈ ಗುಂಡಿನ ದಾಳಿ ನಡೆದಿರುವಂತಿದೆ. ನಾವು ದಾಳಿಕೋರರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಘಟನೆಯು ರಾಷ್ಟ್ರೀಯ ಉತ್ತರ ಪ್ರದೇಶದ ನೆರೆಯಲ್ಲೇ ಇರುವ ಗ್ವಾಲಿಯರ್ ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಹೆದ್ದಾರಿ 44ರಲ್ಲಿನ ಡಾಗ್ರಾಯಿ ಟೋಲ್ ಪ್ರಾಝಾದಲ್ಲಿ ನಡೆದಿದೆ.

ಸಂತ್ರಸ್ತರ ಕುಟುಂಬದ ಸದಸ್ಯರು ಬುಧವಾರ ಘಟನಾ ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಮುಖ್ಯ ಸಂಗತಿಗಳನ್ನು ಪೊಲೀಸರು ನಿರ್ಲಕ್ಷಿಸುತ್ತಿದ್ದಾರೆ ಎಂದು ಮಾಧ್ಯಮಗಳೆದುರು ದೂರಿದ್ದಾರೆ. ಪೊಲೀಸರು ಅಪರಾಧ ಘಟನೆಯ ತಪ್ಪು ದೃಶ್ಯಾವಳಿಯನ್ನು ನಮಗೆ ತೋರಿಸುತ್ತಿದ್ದಾರೆ ಎಂದು ಈ ಪೈಕಿ ಒಬ್ಬರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News