ಪುಣೆ | ಊಟ ನಿರಾಕರಿಸಿದ್ದಕ್ಕೆಹೋಟೆಲ್ ಗೆ ಟ್ರಕ್ ನುಗ್ಗಿಸಿದ ಪಾನಮತ್ತ ಚಾಲಕ

Update: 2024-09-07 13:52 GMT

PC : PTI

ಪುಣೆ : ಊಟ ನಿರಾಕರಿಸಿದ್ದಕ್ಕೆ ಪಾನಮತ್ತ ಚಾಲಕನೊಬ್ಬ ಶುಕ್ರವಾರ ರಾತ್ರಿ ಹೊಟೇಲ್ ಗೆ ಟ್ರಕ್ ನುಗ್ಗಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಚಾಲಕನು ಸೊಲ್ಲಾಪುರದಿಂದ ಪುಣೆಗೆ ಪ್ರಯಾಣಿಸುತ್ತಿದ್ದು ಊಟಕ್ಕಾಗಿ ಹಿಂಗಂಗಾವ್‌ನ ಹೊಟೇಲ್ ಬಳಿ ನಿಲ್ಲಿಸಿದ್ದ ಎನ್ನಲಾಗಿದೆ. ಹೊಟೇಲ್ ಒಳ ಹೋಗಿ ಊಟ ಕೇಳಿದಾಗ ಮಾಲೀಕ ಊಟ ಕೊಡಲು ನಿರಾಕರಿಸಿದ್ದಕ್ಕೆ ಪಾನಮತ್ತ ಚಾಲಕ ಆಕ್ರೋಶಗೊಂಡಿದ್ದಾನೆ. ಬಳಿಕ ಹೊಟೇಲ್ ಗೆ ಟ್ರಕ್ ನುಗ್ಗಿಸಿ, ಕಟ್ಟಡಕ್ಕೆ ಹಾನಿ ಮಾಡಿದ್ದಾನೆ. ಹೊಟೇಲ್ ಹೊರಗೆ ನಿಲ್ಲಿಸಿದ್ದ ಕಾರಿಗೂ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಚಾಲಕನನ್ನು ತಡೆಯಲು ಕೆಲವರು ಟ್ರಕ್‌ಗೆ ಕಲ್ಲು ತೂರಿದ್ದಾರೆ. ಟ್ರಕ್‌ನ ಚಕ್ರಗಳು ಪಂಚರ್ ಆಗಿ ಮುಂದೆ ಚಲಿಸದದಿದ್ದಾಗ ಚಾಲಕ ಟ್ರಕ್ ನಿಲ್ಲಿಸಿದ ಎನ್ನಲಾಗಿದೆ. ಹೊಟೇಲ್ ಗೋಕುಲ್ ಬಳಿ ನಿಂತಿದ್ದ ಕೆಲವು ವ್ಯಕ್ತಿಗಳು ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಟ್ರಕ್ ನಿಂತಾಗ, ಭಾವೋದ್ವೇಗಕ್ಕೊಳಗಾದ ಚಾಲಕ ತನ್ನ ಕೃತ್ಯಕ್ಕೆ ಖೇದ ವ್ಯಕ್ತಪಡಿಸುವುದು, ಊಟಕ್ಕಾಗಿ ಅಂಗಲಾಚುವುದು ವೀಡಿಯೊದಲ್ಲಿ ಸೆರೆಯಾಗಿದೆ. ಪೊಲೀಸರು ಪಾನಮತ್ತ ಚಾಲಕನನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News