ಮುಂಬೈ | ಆಟೋರಿಕ್ಷಾ ಢಿಕ್ಕಿಯಾಗಿದ್ದಕ್ಕೆ ಗಲಾಟೆ; ಕುಟುಂಬದ ಎದುರೇ ವ್ಯಕ್ತಿಯ ಥಳಿಸಿ ಹತ್ಯೆ

Update: 2024-10-15 10:52 GMT

PC : NDTV 

ಮುಂಬೈ: ತನ್ನ ವಾಹನಕ್ಕೆ ಆಟೋರಿಕ್ಷಾ ಢಿಕ್ಕಿ ಹೊಡೆಯಿತೆಂದು ವಾಗ್ವಾದಕ್ಕಿಳಿದ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ಶನಿವಾರ ಮುಂಬೈನ ಮಲಾಡ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತ ಆಕಾಶ್ ಮಯೀನ್ ಎಂದು ಗುರುತಿಸಲಾಗಿದೆ. ಈ ಗಲಾಟೆಯ ಸಂದರ್ಭದಲ್ಲಿ ಅವರೊಂದಿಗೆ ಅವರ ಪೋಷಕರೂ ಇದ್ದರು ಎಂದು ಹೇಳಲಾಗಿದೆ.

ಶನಿವಾರ ಸಂಜೆ ಪುಷ್ಪಾ ಪಾರ್ಕ್ ಬಳಿ ಆಟೋರಿಕ್ಷಾ ಚಾಲಕನು ಆಕಾಶ್ ಕಾರನ್ನು ಓವರ್ ಟೇಕ್ ಮಾಡಲು ಯತ್ನಿಸುವಾಗ, ಅವರ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಈ ಘಟನೆಯಿಂದ ಇಬ್ಬರ ನಡುವೆ ವಾಗ್ವಾದ ನಡೆದು, ಆಟೋರಿಕ್ಷಾ ಚಾಲಕ ಸ್ಥಳದಿಂದ ತೆರಳಿದ್ದಾನೆ ಎಂದು ದಿಂಡೋಶಿ ಪೊಲೀಸರು ತಿಳಿಸಿದ್ದಾರೆ.

ಆದರೆ, ಆಟೋ ಚಾಲಕನ ಪರವಾಗಿ ಘಟನಾ ಸ್ಥಳದಲ್ಲಿ ನೆರೆದಿದ್ದ ಗುಂಪೊಂದು ಆಕಾಶ್ ಮೇಲೆ ಹಲ್ಲೆ ನಡೆಸಿದೆ. ಆಕಾಶ್ ಮೇಲೆ ಹಲ್ಲೆ ನಡೆಸಿದ ಗುಂಪು, ಅವರಿಗೆ ಗುದ್ದಿ, ಒದ್ದಿರುವುದರಿಂದ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕಾಶ್ ತಂದೆ ತಮ್ಮ ಪುತ್ರನ ಮೇಲಿನ ಹಲ್ಲೆಯನ್ನು ತಡೆಯಲು ಯತ್ನಿಸಿದರೂ, ದಾಳಿಕೋರ ಗುಂಪು ಅವರನ್ನು ದೂರ ತಳ್ಳಿದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಕಾಶ್‌ರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಸಂಬಂಧ ರವಿವಾರ ಆರು ಮಂದಿ ಹಾಗೂ ಸೋಮವಾರ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಅಕ್ಟೋಬರ್ 22ರವರೆಗೆ ಪೊಲೀಸರ ವಶದಲ್ಲಿರಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News