ಅತಿರಥರನ್ನು ಮಣಿಸಿದ ಟಿಎಂಸಿಯ ಹೊಸಮುಖಗಳು

Update: 2024-06-05 16:33 GMT

PC ; PTI

ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ ತುಸು ದುರ್ಬಲವಾಗಿರುವಂತೆ ಕಂಡಿದೆ. ಆದಾಗ್ಯೂ 2019ರ ಲೋಕಸಭಾ ಚುನಾವಣೆಗಿಂತ ಈ ಸಲ ಉತ್ತಮ ನಿರ್ವಹಣೆಯನ್ನು ತೋರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯು 22 ಸ್ಥಾನಗಳನ್ನು ಗೆದ್ದರೆ ಈ ಸಲ ಅದು 29 ಸ್ಥಾನಗಳಲ್ಲಿ ಜಯಗಳಿಸಿದೆ ಮತ್ತು ಮತಗಳಿಕೆ ಪ್ರಮಾಣವನ್ನು 45.76 ಶೇಕಡಕ್ಕೆ ಹೆಚ್ಚಿಸಿಕೊಂಡಿದೆ. ಅಷ್ಟೇ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಕಡಿವಾಣ ಹಾಕಿದೆ.

ಪಕ್ಷದೊಳಗೆ ತಳಮಟ್ಟದಲ್ಲಿ ಹೊಗೆಯಾಡುತ್ತಿದ್ದ ಆಡಳಿತ ವಿರೋಧಿ ಅಲೆ ಹಾಗೂ ಆಂತರಿಕ ಒಡಕನ್ನು ನಿಭಾಯಿಸುತ್ತಲೇ ಟಿಎಂಸಿ ನಾಯಕತ್ವವು ಪಕ್ಷವನ್ನು ಗೆಲುವಿವ ದಡಕ್ಕೆ ಸೇರಿಸುವಲ್ಲಿ ಸಫಲವಾಗಿದೆ. ಹಲವಾರು ನೂತನ ಅಭ್ಯರ್ಥಿಗಳನ್ನು ಪರಿಚಯಿಸುವ ಮೂಲಕ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ.ಟಿಎಂಸಿ ಟಿಕೆಟ್ ನಲ್ಲಿ ಸ್ಪರ್ಧಿಸಿರುವ ಬಹುತೇಕ ನೂತನ ಅಭ್ಯರ್ಥಿಗಳು ಎದುರಾಳಿ ಪಕ್ಷಗಳ ಪ್ರಮುಖ ಅಭ್ಯರ್ಥಿಗಳನ್ನು ಪರಾಭವಗೊಳಿಸಿದ್ದಾರೆ.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಕಾರಣರಾದ ಕೆಲವು ನೂತನ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಯೂಸುಫ್ ಪಠಾಣ್ (ಬಹರಾಮಪುರ):

(ಯೂಸುಫ್ ಪಠಾಣ್ : PC: PTI )

ಟಿಎಂಸಿ ಮೂಲಕ ರಾಜಕಾರಣಕ್ಕೆ ಧುಮುಕಿರುವ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು 25 ವರ್ಷಗಳಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರ ಭದ್ರಕೋಟೆಯಾದ ಬೆಹ್ರಾಮ್ಪುಕ್ಕೆ ಲಗ್ಗೆ ಹಾಕಿದ್ದಾರೆ. ಯೂಸುಫ್ ಪಠಾಣ್ ರಾಜಕಾರಣಕ್ಕೆ ಹೊಸಬರಾದರೂ ಅವರು ತನ್ನ ಭರ್ಜರಿ ಚುನಾವಣಾ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಸಫಲರಾಗಿದ್ದು, ಅಭೂತಪೂರ್ವ ಜಯಗಳಿಸಿದ್ದಾರೆ.

ಜಗದೀಶ್ ಚಂದ್ರ ಬರ್ಮನ್ ಬಸೂನಿಯಾ

ಬಿಜೆಪಿಯ ಭದ್ರಕೋಟೆಯಾಗಿರುವ ಕೂಚ್ಬೆಹಾರ್ ಕ್ಷೇತ್ರದಲ್ಲಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿಶಿತ್ ಪ್ರಾಮಾಣಿಕ್ ಅವರನ್ನು ಮಾಜಿ ಶಾಸಕ,ಟಿ ಜಗದೀಶ್ಚಂದ್ರ ಬಾಸುನಿಯಾ ಪರಾಭವಗೊಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವಿಲ್ಲದೆ ಇದ್ದರೂ ಬಾಸುನಿಯಾ ಅವರು ಪ್ರಾಮಾಣಿಕ್ ಅವರನ್ನು ಭರ್ಜರಿ ಮತಗಳ ಅಂತರದಿಂದ ಸೋಲಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷಕ್ಕೆ ಅಘಾತವುಂಟು ಮಾಡಿದ್ದಾರೆ.

ಕೀರ್ತಿ ಆಝಾದ್ (ಬರ್ಧಮಾನ್-ದುರ್ಗಾಪುರ)

(ಕೀರ್ತಿ ಆಝಾದ್ : PC : NDTV)

 ಅಚ್ಚರಿಯ ನಡೆಯೊಂದರಲ್ಲಿ ಟಿಎಂಸಿ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಅವರನ್ನು ಬರ್ದಮಾನ್-ದುರ್ಗಾಪುರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ಹಿರಿಯ ಬಿದೆಪಿ ನಾಯಕ ದಿಲೀಪ್ ಘೋಷ್ ಸ್ಪರ್ಧಿಸಿದ್ಧ ಈ ಕ್ಷೇತ್ರದಲ್ಲಿ ವಿಶ್ವಕಪ್ ವಿಜೇತ ಕ್ರಿಕೆಟ್ ತಾರೆ ಕೀರ್ತಿ ಆಝಾದ್ 1.37 ಲಕ್ಷಕ್ಕೂ ಅಧಿಕ ಮತದಿಂದ ಜಯಗಳಿಸಿದ್ದಾರೆ. 2019ರಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲವು ಸಾಧಿಸಿತ್ತು.

ಜೂನ್ ಮಾಲಿಯಾ (ಮಿಡ್ನಾಪುರ್‌)

(ಜೂನ್ ಮಾಲಿಯಾ :  PC ; X )

 ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು 2019ರಲ್ಲಿ ಮಿಡ್ನಾಪುರ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಈ ಕ್ಷೇತ್ರದಿಂದ ಅಗ್ನಿಮಿತ್ರ ಪಾಲ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ 48.62 ಶೇ. ಮತಗಳನ್ನು ಗಳಿಸಿತ್ತು.ಆದರೆ ತೃಣಮೂಲ ಕಾಂಗ್ರೆಸ್ ಹಿರಿಯ ಹಾಗೂ ಅನುಭವಿ ಮುಖವನ್ನು ಕಣಕ್ಕಿಳಿಸುವ ಬದಲು ಚಿತ್ರನಟಿ ಮಾಲಿಯಾ ಅವರಿಗೆ ಟಿಕೆಟ್ ನೀಡಿತ್ತು. 2021ರ ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದುದೇ ಆಕೆಯ ಏಕೈಕ ಚುನಾವಣಾ ಅನುಭವವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಿದ ಮಾಲಿಯಾ ಅವರು ಮಿಡ್ನಾಪುರ್‌ ಕ್ಷೇತ್ರವನ್ನು ಟಿಎಂಸಿ ಪಕ್ಷಕ್ಕೆ ಮರಳಿ ತಂದುಕೊಟ್ಟರು.

ಆರೂಪ್ ಚಕ್ರವರ್ತಿ(ಬಂಕುರಾ)

(ಆರೂಪ್ ಚಕ್ರವರ್ತಿ :  PC: X )

 ಶಾಸಕನಾಗಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯಿಂದ ಸೀಟನ್ನು ಕಸಿದಕೊಂಡ ಟಿಎಂಸಿಯ ಅಭ್ಯರ್ಥಿಗಳಲ್ಲಿ ಆರೂಪ್ ಚಕ್ರವರ್ತಿ ಕೂಡಾ ಒಬ್ಬರು. 2019ರ ಚುನಾವಣೆಯಲ್ಲಿ ಬಂಕುರಾ ಕ್ಷೇತ್ರವನ್ನು ಕೇಂದ್ರ ಸಹಾಯಕ ಶಿಕ್ಷಣ ಸಚಿ ಡಾ.ಸುಭಾಶ್ ಸರ್ಕಾರ್ 1.7 ಲಕ್ಷ ಮತಗಳಿಂದ ಜಯಗಳಿಸಿದ್ದರು. ಆದರೆ ಈ ಸಲ ಚಕ್ರವರ್ತಿ ಅವರು ಅತ್ಯಂತ ನಿಕಟ ಸ್ಪರ್ಧೆಯಲ್ಲಿ ಸುಭಾಶ್ ಸರ್ಕಾರ್ಅವರನ್ನು ಪರಾಭವಗೊಳಿಸುವಲ್ಲಿ ಸಫಲರಾಗಿದ್ದಾರೆ.

ರಚನಾ ಬ್ಯಾನರ್ಜಿ (ಹೂಗ್ಲಿ)

(ರಚನಾ ಬ್ಯಾನರ್ಜಿ : PC : PTI)

ಹೂಗ್ಲಿ 2019ರಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಇನ್ನೊಂದು ಕ್ಷೇತ್ರವಾಗಿದೆ. ಆಗ ಟಿಎಂಸಿಯ ಹಾಲಿ ಸಂಸದೆಯನ್ನು ಪರಾಭವಗೊಳಿಸಿದ್ದ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ಎರಡನೆ ಅವಧಿಗೆ ಸ್ಪರ್ಧಿಸಿದ್ದರು.ಯಾವುದೇ ಅನುಭವಿ ಸ್ಥಳೀಯ ನಾಯಕರ ಕೊರತೆಯನ್ನು ಎದುರಿಸುತ್ತಿದ್ದ ಟಿಎಂಸಿಯು ಪಶ್ಚಿಮ ಬಂಗಾಳದ ಟಿವಿ ಸಿಲೆಬ್ರಿಟಿ ಹಾಗೂ ರಾಜಕಾರಣಕ್ಕೆ ಸಂಪೂರ್ಣ ಹೊಸಬರಾದ ರಚನಾ ಬ್ಯಾನರ್ಜಿ ಅವರಿಗೆ ಟಿಕೆಟ್ ನೀಡಿತ್ತು. ಲಾಕೆಟ್ ಚಟರ್ಜಿ ಅವರನ್ನು ಪರಾಭವಗೊಳಿಸಿರುವ ರಚನಾ ಅವರು ಹೂಗ್ಲಿ ಕ್ಷೇತ್ರವನ್ನು ಟಿಎಂಸಿಗೆ ಮರಳಿ ತಂದುಕೊಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News