ಕೆಲಸದ ಒತ್ತಡದಿಂದಾಗಿ EY ಉದ್ಯೋಗಿ ಸಾವು: ಕಾರ್ಮಿಕ ಸಚಿವಾಲಯದಿಂದ ವರದಿ ಕೇಳಿದ ರಾಷ್ಟ್ರಿಯ ಮಾನವ ಹಕ್ಕುಗಳ ಆಯೋಗ

Update: 2024-09-22 10:39 GMT

 ಅನ್ನಾ ಸೆಬಾಸ್ಟಿನ್ ಪೆರಾಯಿಲ್ (Photo credit: linkedin)

ಹೊಸದಿಲ್ಲಿ: ಪುಣೆಯ ಅರ್ನಸ್ಟ್ ಆ್ಯಂಡ್ ಯಂಗ್ (EY) ಕಂಪನಿಯ ಲೆಕ್ಕ ಪರಿಶೋಧಕಿ ಅನ್ನಾ ಸೆಬಾಸ್ಟಿನ್ ಪೆರಾಯಿಲ್(26) ಅವರು ಸೇರಿದ ನಾಲ್ಕೇ ತಿಂಗಳುಗಳಲ್ಲಿ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿದ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ರಾಷ್ಟ್ರಿಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು,ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ನೋಟಿಸ್ ಹೊರಡಿಸಿದೆ.

ಕೆಲಸದ ಒತ್ತಡ ಮತ್ತು ದೀರ್ಘ ಕೆಲಸದ ಅವಧಿಯು ತನ್ನ ಪುತ್ರಿಯ ದೈಹಿಕ,ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿತ್ತು ಮತ್ತು ಅಂತಿಮವಾಗಿ ಆಕೆಯ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಅನ್ನಾರ ತಾಯಿ EY ಇಂಡಿಯಾದ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.

ಅನ್ನಾರ ತಾಯಿ ಮಾಡಿರುವ ಆರೋಪವನ್ನು ಕಂಪನಿಯು ನಿರಾಕರಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಎನ್‌ಎಚ್‌ಆರ್‌ಸಿ,ಹೆಚ್ಚುವರಿ ಕೆಲಸದ ಹೊರೆ ಮತ್ತು ಅನಾರೋಗ್ಯಕರ ಕೆಲಸದ ವಾತಾವರಣ ಕುರಿತು ಮಾಧ್ಯಮಗಳ ವರದಿಗಳು ಉದ್ಯೋಗಿಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಗಂಭೀರ ಕಳವಳಗಳನ್ನುಂಟು ಮಾಡಿವೆ. ತನ್ನ ಉದ್ಯೋಗಿಗಳಿಗೆ ಸುರಕ್ಷಿತ,ಸುಭದ್ರ ಮತ್ತು ಧನಾತ್ಮಕ ಕೆಲಸದ ವಾತಾವರಣವನ್ನು ಒದಗಿಸುವುದು ಪ್ರತಿಯೊಬ್ಬ ಉದ್ಯೋಗದಾತರ ಪ್ರಮುಖ ಕರ್ತವ್ಯವಾಗಿದೆ. ತಮ್ಮೊಂದಿಗೆ ದುಡಿಯುತ್ತಿರುವ ಪ್ರತಿಯೊಬ್ಬರನ್ನೂ ಘನತೆಯಿಂದ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಲಾಗುತ್ತಿದೆ ಎನ್ನುವದನ್ನು ಅವರು ಖಚಿತಪಡಿಸಬೇಕು ಎಂದು ತಿಳಿಸಿದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವಾಲಯಕ್ಕೆ ಸೂಚಿಸಿರುವ ಎನ್‌ಎಸ್‌ಆರ್‌ಸಿ,ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ತಿಳಿಸಿದೆ.

ಅನ್ನಾ ಜು.20ರಂದು ಪುಣೆಯಲ್ಲಿ ನಿಧನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News