ತಮಿಳುನಾಡು ವಿಧಾನಸಭೆಯ ಅಧಿವೇಶನದ ಮೊದಲ ದಿನ ಭಾಷಣ ಮಾಡಲು ನಿರಾಕರಿಸಿದ ರಾಜ್ಯಪಾಲ ಆರ್‌.ಎನ್‌. ರವಿ

Update: 2024-02-12 07:26 GMT

ಆರ್‌.ಎನ್‌. ರವಿ (PTI)

ಚೆನ್ನೈ: ತಮಿಳುನಾಡು ವಿಧಾನಸಭಾ ಅಧಿವೇಶನದ ಮೊದಲ ದಿನದಂದು ಪದ್ಧತಿಯಂತೆ ಭಾಷಣ ಮಾಡಲು ರಾಜ್ಯದ ರಾಜ್ಯಪಾಲ ಆರ್‌ ಎನ್‌ ರವಿ ನಿರಾಕರಿಸಿದ್ದಾರೆ. ರಾಜ್ಯಪಾಲರ “ಸಿದ್ಧಪಡಿಸಿದ ಭಾಷಣದಲ್ಲಿ ವಾಸ್ತವಿಕವಾಗಿ ಹಾಗೂ ನೈತಿಕ ನೆಲೆಯಲ್ಲಿ ಒಪ್ಪದ ಹಲವಾರು ಅಂಶಗಳಿವೆ. ಇಂತಹ ಭಾಷಣವನ್ನು ಓದಿದ್ದೇ ಆದಲ್ಲಿ ಅದು ಸಂವಿಧಾನವನ್ನು ಅಣಕಿಸಿದಂತಾಗಬಹುದು. ಆದುದರಿಂದ ಈ ಸದನಕ್ಕೆ ಗೌರವದೊಂದಿಗೆ ನನ್ನ ಭಾಷಣ ಮುಕ್ತಾಯಗೊಳಿಸುತ್ತೇನೆ,” ಎಂದಷ್ಟೇ ಅವರು ತಮ್ಮ ಇಂದಿನ ಭಾಷಣದಲ್ಲಿ ಹೇಳಿದ್ದಾರೆ.

“ರಾಷ್ಟ್ರಗೀತೆಗೆ ಅರ್ಹ ಗೌರವ ನೀಡಿ ರಾಜ್ಯಪಾಲರ ಭಾಷಣದ ಆರಂಭದ ಮೊದಲು ಹಾಗೂ ಅಂತ್ಯದ ನಂತರ ಅದನ್ನು ನುಡಿಸುವಂತೆ ತಾನು ಮಾಡಿದ ಸತತ ಮನವಿ ಹಾಗೂ ಸಲಹೆಯನ್ನು ನಿರ್ಲಕ್ಷಿಸಲಾಗಿದೆ,” ಎಂದೂ ಅವರು ಹೇಳಿದ್ದಾರೆ.

ಸದನವು ಜನರ ಒಳಿತಿಗಾಗಿ ಉತ್ತಮ ಮತ್ತು ಆರೋಗ್ಯಕರ ಚರ್ಚೆ ನಡೆಸುವುದೆಂಬ ವಿಶ್ವಾಸವಿದೆ ಎಂದು ಹೇಳಿ ತಮ್ಮ ಭಾಷಣ ಕೊನೆಗೊಳಿಸಿದ್ದಾರೆ.

ಇದರ ಬೆನ್ನಲ್ಲೇ ಸ್ಪೀಕರ್‌ ಎಂ ಅಪ್ಪಾವಿ ಅವರು ರಾಜ್ಯಪಾಲರ ಭಾಷಣದ ತಮಿಳು ಅನುವಾದವನ್ನು ಓದಿದರು.

ರಾಜ್ಯಪಾಲರ ಭಾಷಣದ ಅನುಮೋದಿತ ಪಠ್ಯವನ್ನು ಮಾತ್ರ ದಾಖಲೆಯಲ್ಲಿರಿಸಿಕೊಳ್ಳುವಂತೆ ಕಳೆದ ವರ್ಷ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ನಿರ್ಣಯವೊಂದನ್ನು ಮಂಡಿಸಿದ ಬೆನ್ನಲ್ಲೇ ರಾಜ್ಯಪಾಲರು ಸದನದಿಂದ ಹೊರನಡೆದಿದ್ದರು. ಸಿದ್ಧಪಡಿಸಿದ ಭಾಷಣದ ಹಲವು ಭಾಗಗಳನ್ನು ರಾಜ್ಯಪಾಲರು ಕೈಬಿಟ್ಟು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News