ಮದುವೆಯಾಗಲು ಹೊರಟ ತೆಲಂಗಾಣ ಸಿಎಂ ದತ್ತು ಪುತ್ರಿ

Update: 2016-05-15 18:28 GMT

ಹೈದರಾಬಾದ್, ಮೇ 15: ಹದಿನೆಂಟರ ಯುವತಿಗೆ 29ರ ಯುವಕ ಸೂಕ್ತ ವರನೇ ಎಂಬುದನ್ನು ನಿರ್ಧರಿಸುವ ಹೊಣೆ ಆಂಧ್ರ ಹಾಗೂ ತೆಲಂಗಾಣ ಪೊಲೀಸರ ಹೆಗಲೇರಿದೆ. ಬೇಸಿಗೆ ರಜೆ ಅವಧಿ ಆರಂಭಕ್ಕೆ ಮುನ್ನ ಈ ಬಗ್ಗೆ ಮಾಹಿತಿ ನೀಡುವಂತೆ ಆಂಧ್ರಪ್ರದೇಶ ಹೈಕೋರ್ಟ್ ಸೂಚನೆ ನೀಡಿರುವುದು ತೆಲಂಗಾಣ ಅಧಿಕಾರಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದೆ.

ಒಂದು ವಿವಾಹದ ಬಗ್ಗೆ ಕೋರ್ಟ್ ಹಾಗೂ ಸರಕಾರಕ್ಕೆ ಏಕಿಷ್ಟು ಕಾಳಜಿ ಎಂಬ ಕುತೂಹಲವೇ? ಏಕೆಂದರೆ ವಧು ತೆಲಂಗಾಣ ಮುಖ್ಯಮಂತ್ರಿ ಟಿ.ಎಸ್.ಚಂದ್ರಶೇಖರ ರಾವ್ ಅವರ ದತ್ತು ಪುತ್ರಿ. ತಂದೆ ಹಾಗೂ ಮಲತಾಯಿಯ ದೌರ್ಜನ್ಯಕ್ಕೆ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದ ಸಿ.ಪ್ರತ್ಯುಷಾ (18) ಎಂಬ ಯುವತಿಯನ್ನು ಮುಖ್ಯಮಂತ್ರಿ ಕಳೆದ ವರ್ಷ ಜುಲೈ 7ರಂದು ದತ್ತು ಪಡೆದದ್ದು ದೊಡ್ಡ ಸುದ್ದಿಯಾಗಿತ್ತು.
ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆದಿದ್ದ ಪ್ರತ್ಯುಷಾ, ಕಳೆದ ತಿಂಗಳು, ಕಾಲೇಜು ಸಿಬ್ಬಂದಿ ಬಳಿ ತನ್ನ ಪ್ರೇಮ ವಿಚಾರ ಬಿಚ್ಚಿಟ್ಟಿದ್ದಳು. ವೆಂಕಟ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದು, ಈ ಕಾರಣಕ್ಕೆ ಶಿಕ್ಷಣವನ್ನು ಅರ್ಧದಿಂದಲೇ ನಿಲ್ಲಿಸಲು ಬಯಸಿದ್ದಾಗಿ ಹೇಳಿದ್ದಳು.
ಆದರೆ ಈ ಪ್ರೇಮ ಕಥಾನಕ ಅಷ್ಟೊಂದು ಸರಳವಲ್ಲ. ಪ್ರತ್ಯುಷಾಳನ್ನು ಕಾರ್ಯಾಚರಣೆಯಲ್ಲಿ ರಕ್ಷಿಸಿದ ಬಳಿಕ ಆಕೆಯ ಪ್ರಕರಣವನ್ನು ಹೈಕೋರ್ಟ್ ಸ್ವಯಂಪ್ರೇರಿತವಾಗಿ ತೆಗೆದುಕೊಂಡು, ಆಕೆಯ ಕಲ್ಯಾಣದ ಉಸ್ತುವಾರಿ ವಹಿಸಿಕೊಂಡಿದೆ. ವೆಂಕಟ್ ರೆಡ್ಡಿ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿದ್ದು, ಇದೀಗ ಪ್ರೇಮ ಪ್ರಕರಣದಿಂದಾಗಿ ಹೈಕೋರ್ಟ್ ಪರೀಕ್ಷೆಗೆ ಗುರಿಯಾಗಬೇಕಾಗಿದೆ. ಆದರೆ ತಮ್ಮ ಪ್ರೇಮ ವಿವರಗಳನ್ನು ಬಹಿರಂಗಪಡಿಸಲು ವೆಂಕಟ್ ನಿರಾಕರಿಸಿದ್ದು, ಪ್ರತ್ಯುಷಾ ಹೆಸರು ಕೆಡಿಸಲು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ತಂದೆ- ಮಲತಾಯಿಯ ದೌರ್ಜನ್ಯದಿಂದ ಬಳಲುತ್ತಿದ್ದ ಆಕೆಯನ್ನು ಸ್ವಯಂಸೇವಾ ಸಂಸ್ಥೆಗಳು ನೀಡಿದ ಸುಳಿವಿನ ಮೇರೆಗೆ ಪಾರು ಮಾಡಲಾಗಿತ್ತು. ಬಳಿಕ ಸಿಎಂ ಆಕೆಯನ್ನು ದತ್ತು ಪಡೆದಿದ್ದರು. ಆರನೆ ತರಗತಿ ಪೂರ್ಣಗೊಳಿಸದ ಪ್ರತ್ಯುಷಾ, ನರ್ಸ್ ಆಗುವ ಬಯಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಆಕೆಯ ಶಿಕ್ಷಣಕ್ಕೆ ಕೆಸಿಆರ್ ವ್ಯವಸ್ಥೆ ಮಾಡಿದ್ದರು. ಬಳಿಕ ಹೈಕೋರ್ಟ್ ಕೂಡಾ ಈ ಪ್ರಕರಣದ ಬಗ್ಗೆ ವಿಶೇಷ ಆಸ್ಥೆ ವಹಿಸಿ, ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಅಧಿಕೃತ ಪೋಷಕರನ್ನಾಗಿ ಆಕೆಗೆ ನಿಯೋಜಿಸಿತ್ತು. ತೆಲಂಗಾಣ ಸರಕಾರ ಆಕೆಯ ಹೆಸರಿನಲ್ಲಿ ಖಾತೆ ತೆರೆದು 6.5 ಲಕ್ಷ ರೂಪಾಯಿ ಠೇವಣಿ ಇರಿಸಿತ್ತು.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಂಕಟ್, ಹೈದರಾಬಾದ್‌ನ ಮಲ್ಕಜಗಿರಿಯ ಸೈಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಮಧ್ಯೆ ಪ್ರತ್ಯುಷಾಗೆ 18 ವರ್ಷ ತುಂಬಿದ್ದು, ತನ್ನ ತಾಯಿಗೆ ತಂದೆ ನೀಡಿದ ವಿಚ್ಛೇದನ ಪರಿಹಾರವಾಗಿ ಒಂದು ಫ್ಲಾಟ್ ಕೂಡಾ ಪಡೆಯಲು ಅರ್ಹಳಾಗಿದ್ದಾಳೆ.

ಇದೀಗ ಅಧಿಕಾರಿಗಳು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು, ನಿರ್ಧಾರ ಪುನರ್ ಪರಿಶೀಲಿಸುವಂತೆ ಪ್ರತ್ಯುಷಾಳಿಗೆ ಸೂಚಿಸಿದ್ದಾರೆ. ಆದರೆ ಆಕೆ ವಯಸ್ಕಳಾಗಿರುವ ಹಿನ್ನೆಲೆಯಲ್ಲಿ, ಹುಡುಗನ ಹಿನ್ನೆಲೆ ತಿಳಿದುಕೊಳ್ಳುವಂತೆಯೂ ಕೋರ್ಟ್, ಪೊಲೀಸರಿಗೆ ಆದೇಶಿಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News