ವಿ.ಎಸ್. ಅಚ್ಯತಾನಂದನ್ ಕೇರಳದ ಫಿಡೆಲ್ ಕ್ಯಾಸ್ಟ್ರೊ- ಸೀತಾರಾಂ ಯೆಚೂರಿ
ತಿರುವನಂತಪುರಂ, ಮೇ 20: ವಿಎಸ್ ಅಚ್ಯುತಾನಂದನ್ ಕೇರಳದ ಕಮ್ಯೂನಿಸ್ಟ್ ಆಂದೋಲನದ ಫಿಡೆಲ್ ಕ್ಯಾಸ್ಟ್ರೊಆಗಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿದ್ದಾರೆ. ಕೇರಳದಲ್ಲಿ ಮುಂಬರುವ ದಿನಗಳಲ್ಲಿ ಆಂದೋಲನಕ್ಕೆ ವಿಎಸ್ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡಲಿದ್ದಾರೆ ಎಂದು ಸಿಪಿಎಂ ವಿಧಾನಸಭಾ ಪಕ್ಷ ನಾಯಕನಾಗಿ ಪಿಣರಾಯಿ ವಿಜಯನ್ ಆಯ್ಕೆಯಾಗಿದ್ದನ್ನು ಘೋಷಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿ.ಎಸ್. ಅಚ್ಯತಾನಂದನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಿಎಸ್ರಿಗೆ ಬೇರೆ ಸ್ಥಾನಮಾನಗಳನ್ನು ನೀಡಲಾಗುವುದೇ ಎಂಬ ಪ್ರಶ್ನೆಗೆ ಅಂತಹ ವಿಷಯವನ್ನು ಈಗ ಯೋಚಿಸಿಲ್ಲ ಎಂದು ಯೆಚೂರಿ ಹೇಳಿದರು. ಪಿಣರಾಯಿ ವಿಜಯನ್ರನ್ನು ಮುಖ್ಯಮಂತ್ರಿಯಾಗಿ ರಾಜ್ಯ ಸೆಕ್ರಟರಿಯೇಟ್ ಮತ್ತು ರಾಜ್ಯ ಸಮಿತಿ ತೀರ್ಮಾನಿಸಿದ ಬಳಿಕ ಶುಕ್ರವಾರ ಸಂಜೆ ಎಕೆಜಿ ಸೆಂಟರ್ನಲ್ಲಿ ಪತ್ರಿಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ವಿಎಸ್ರನ್ನು ಫಿಡೆಲ್ ಕ್ಯಾಸ್ಟ್ರೋಗೆ ಹೋಲಿಸಿ ಹೆಚ್ಚು ವಯಸ್ಸು ಮತ್ತು ಆರೋಗ್ಯ ಸಮಸ್ಯೆಗೆಳನ್ನು ಎತ್ತಿ ಹೇಳಿದ ಯಚೂರಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಲಿದ್ದಾರೆಂದು ಮಾಧ್ಯಮಗಳಿಗೆ ಹೇಳಿದ್ದಾರೆ. ವಿಎಸ್ ಎಲ್ಲವನ್ನೂ ಮೌನವಾಗಿ ವೀಕ್ಷಿಸುತ್ತಾ ಕೂತಿದ್ದರು. ಪತ್ರಿಕಾಗೋಷ್ಠಿ ಮುಗಿದ ಬಳಿಕ ಎಕೆಜಿ ಸೆಂಟರ್ನಿಂದ ಕಾರು ಪಾರ್ಕ್ ಮಾಡಿದ್ದಲ್ಲಿಯವರೆಗೆ ಯೆಚೂರಿ ವಿಎಸ್ ಜೊತೆ ಬಂದು ಹಸ್ತಲಾಘವ ನೀಡಿ ವಿಎಸ್ರನ್ನು ಬೀಳ್ಕೊಟ್ಟಿದ್ದಾರೆಂದು ವರದಿಯಾಗಿದೆ.