ಜಿಲ್ಲಾಧಿಕಾರಿ ಅಪಹರಣ:ಮಹಿಳಾ ನಕ್ಸಲ್ಗೆ ಜೀವಾವಧಿ ಶಿಕ್ಷೆ
Update: 2016-05-24 16:10 GMT
ಮಲ್ಕನ್ಗಿರಿ(ಒಡಿಶಾ),ಮೇ 24: ಐದು ವರ್ಷಗಳ ಹಿಂದೆ ಆಗಿನ ಜಿಲ್ಲಾಧಿಕಾರಿ ವಿನೀಲ್ ಕೃಷ್ಣ ಅವರನ್ನು ಅಪಹರಿಸಿದ್ದಕ್ಕಾಗಿ ಮಹಿಳಾ ನಕ್ಸಲ್ ಮತ್ತು ಇನ್ನೋರ್ವ ವ್ಯಕ್ತಿಗೆ ಇಲ್ಲಿಯ ಜಿಲ್ಲಾ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಮಾಜಿ ಸರಕಾರಿ ನೌಕರ ತಪನ್ ಶಾ ಮತ್ತು ಮಾವೋವಾದಿ ಎಂ.ದಿವ್ಯಾ ಅಲಿಯಾಸ್ ಶಾಂತಿ ಶಿಕ್ಷೆಗೆ ಗುರಿಯಾದವರು. ಇನ್ನೋರ್ವ ಆರೋಪಿ ಘಾಸಿರಾಂ ಪಾಂಗಿ ಎಂಬಾತನನ್ನು ನ್ಯಾಯಾಲಯವು ಸಾಕ್ಷಾಧಾರಗಳ ಕೊರತೆಯಿಂದಾಗಿ ಬಿಡುಗಡೆಗೊಳಿಸಿದೆ.
2011,ಫೆ.16ರಂದು ನಕ್ಸಲ್ ಪೀಡಿತ ಚಿತ್ರಕೊಂಡ ಪ್ರದೇಶಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದಾಗ ವಿನೀಲ್ ಕೃಷ್ಣ ಮತ್ತು ಜ್ಯೂನಿಯರ್ ಎಂಜಿನಿಯರ್ ಪಬಿತ್ರ ಮ್ಹಾಜಿ ಅವರನ್ನು ನಕ್ಸಲರ ಗುಂಪೊಂದು ಅಪಹರಿಸಿತ್ತು. ಮ್ಹಾಜಿಯನ್ನು ಫೆ.22ರಂದು ಮತ್ತು ವಿನೀಲ್ ಕೃಷ್ಣರನ್ನು ಫೆ.24ರಂದು ಗುಂಪು ಬಿಡುಗಡೆಗೊಳಿಸಿತ್ತು.