ನ್ಯಾಯಾಲಯದಿಂದ ಕ್ಲೀನ್ಚಿಟ್
ಅಹ್ಮದಾಬಾದ್, ಜೂ.18: ಕಳೆದ 2002ರ ಗುಜರಾತ್ ದಂಗೆಯ ವೇಳೆ ಗುಜರಾತ್ ಪೊಲೀಸರು ನಿಷ್ಕ್ರಿಯರಾಗಿದ್ದರು ಹಾಗೂ ವಿಶಾಲ ಪಿತೂರಿಯೊಂದರ ಭಾಗವಾಗಿದ್ದರೆಂದು ಆರೋಪಿಸುವುದನ್ನು ನಿಲ್ಲಿಸುವಂತೆ ವಿಶೇಷ ಸಿಟ್ ನ್ಯಾಯಾಲಯ ಕರೆ ನೀಡಿದೆ.
69 ಜನರ ಸಾವಿಗೆ ಕಾರಣವಾದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ದೊಡ್ಡ ಪಿತೂರಿಯೊಂದಿತ್ತೆಂಬ ಪ್ರತಿಪಾದನೆಯನ್ನು ತಳ್ಳಿಹಾಕಿರುವ ವಿಶೇಷ ನ್ಯಾಯಾಧೀಶ ಪಿ.ಬಿ. ದೇಸಾಯಿ, ತನ್ನ ಅಭಿಪ್ರಾಯದಲ್ಲಿ ಈ ವಿವಾದ ಅಂತ್ಯವಾಗಿದೆ ಹಾಗೂ ಅದನ್ನೀಗ ಸೂಕ್ತವಾಗಿ ದಫನ ಮಾಡಬೇಕಾಗಿದೆಯೆಂದು ಶುಕ್ರವಾರ ಹೇಳಿದ್ದಾರೆ.
ಆಗಿನ ಪೊಲೀಸ್ ಅಧಿಕಾರಿಗಳಾಗಿದ್ದ ಅಹ್ಮದಾಬಾದ್ನ ಪೊಲೀಸ್ ಆಯುಕ್ತ ಪಿ.ಸಿ. ಪಾಂಡೆ, ಜಂಟಿ ಪೊಲೀಸ್ ಆಯುಕ್ತ ಎಂ.ಕೆ. ಟಂಡನ್, ಡಿಸಿಪಿ, ಪಿ.ಒ. ಗೊಂಧಿ ಹಾಗೂ ಮಾಜಿ ತನಿಖೆದಾರರ ವಿರುದ್ಧ ವಿಚಾರಣೆಯ ವೇಳೆ ನಿಷ್ಕ್ರಿಯತೆ ಹಾಗೂ ಕರ್ತವ್ಯ ನಿರ್ಲಕ್ಷದ ತಪ್ಪು ಹೊರಿಸುವಂತೆ ಈ ಹತ್ಯಾಕಾಂಡದ ಸಂತ್ರಸ್ತರು ಅನೇಕ ಸಂದರ್ಭಗಳಲ್ಲಿ ಮನವಿ ಮಾಡಿದ್ದರು. ಆ ಎಲ್ಲ ಸಂದರ್ಭಗಳಲ್ಲೂ ನ್ಯಾಯಾಲಯವು ದಂಡ ಪ್ರಕ್ರಿಯಾ ಸಂಹಿತೆಯ ಸೆ.319 ರನ್ವಯ ಮಾಡಿದ್ದ ಅವರ ಮನವಿಯನ್ನು ತಿರಸ್ಕರಿಸಿತ್ತು.