ಸಮಾನ ನಾಗರಿಕ ಸಂಹಿತೆ ಜಾತ್ಯತೀತತೆಗೆ ದೊಡ್ಡ ಮಾರಕ
Update: 2016-07-03 18:32 GMT
ತಿರುವನಂತಪುರಂ, ಜು.3: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸಿರುವ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕೂಟ ದೇಶದ ಜಾತ್ಯತೀತ ಶಕ್ತಿಗೆ ಅದು ದೊಡ್ಡ ಮಾರಕವಾಗಿಲಿದೆ ಎಂದು ಅಭಿಪ್ರಾಯಪಟ್ಟಿದೆ. ''ಸಮಾನ ನಾಗರಿಕ ಸಂಹಿತೆಯಿಂದ ದೇಶದ ಜನರು ಎತ್ತಿಹಿಡಿದಿರುವ ಏಕತೆ ಹಾಗೂ ಜಾತ್ಯತೀತತೆಗೆ ದೊಡ್ಡ ಅಪಾಯವಿದೆ'' ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ''ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರದ ಬಗ್ಗೆ ಕಾನೂನು ಆಯೋಗದಿಂದ ಕೇಂದ್ರ ಸರಕಾರ ಅಭಿಪ್ರಾಯ ಕೇಳಿದೆ. ಮುಂಬರುವ ಉ.ಪ್ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ರಾಜಕೀಯ ಲಾಭಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೋಮು ಧ್ರುವೀಕರಣದ ಮೂಲಕ ಸಂಘಪರಿವಾರವು ಇದರ ಲಾಭವನ್ನು ಪಡೆಯಲು ಉದ್ದೇಶಿಸಿದೆ'' ಎಂದು ಅವರು ಆರೋಪಿಸಿದ್ದಾರೆ.