ಸ್ಮೃತಿ ಇರಾನಿಗೆ ಮತ್ತೊಂದು ಹಿನ್ನಡೆ
ನವದೆಹಲಿ,ಜು.16 : ಇತ್ತೀಚೆಗಿನ ಕೇಂದ್ರ ಸಂಪುಟ ಪುನರ್ರಚನೆ ಸಂದರ್ಭ ತಮ್ಮ ಹಿಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಕಳೆದುಕೊಂಡು ಜವುಳಿ ಖಾತೆ ಪಡೆದಿದ್ದ ಸಚಿವೆ ಸ್ಮೃತಿ ಇರಾನಿಗೆಈಗ ಮತ್ತೊಂದು ಹಿನ್ನಡೆಯಾಗಿದೆ. ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ವಿಶೇಷ ಆಹ್ವಾನಿತೆಯಾಗಿದ್ದ ಆಕೆಯನ್ನು ಆ ಹುದ್ದೆಯಿಂದ ಕೈಬಿಡಲಾಗಿದೆ.ಈ ಕ್ಯಾಬಿನೆಟ್ ಸಮಿತಿಯನ್ನು ಗುರುವಾರ ರಾತ್ರಿ ಪ್ರಧಾನಿ ಮೋದಿ ಪುನರ್ರಚಿಸಿದ್ದರು. ಸ್ಮೃತಿ ಬದಲು ಎಚ್ಆರ್ಡಿ ಸಚಿವರಾಗಿ ನೇಮಕಗೊಂಡಿರುವ ಪ್ರಕಾಶ್ ಜಾವ್ಡೇಕರ್ ಸಂಸತ್ತಿನಲ್ಲಿ ಸರಕಾರದ ತಂತ್ರಗಾರಿಕೆಯನ್ನು ರೂಪಿಸುವ ಸಂಸದೀಯ ವ್ಯವಹಾರಗಳ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಕ್ಷಣಾ ಕ್ಯಾಬಿನೆಟ್ ಸಮಿತಿಯನ್ನು ಹೊರತು ಪಡಿಸಿ ಇತರ ಆರು ಸಮಿತಿಗಳನ್ನು ಪುನರ್ರಚಿಸಲಾಗಿದೆ. ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯಲ್ಲಿಹೊಸ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಅನಂತ್ ಕುಮಾರ್, ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯಿಂದ ಕಾನೂನು ಹಾಗೂ ನ್ಯಾಯ ಇಲಾಖಾ ಸಚಿವ ಸ್ಥಾನ ಪಡೆದಿರುವ ರವಿಶಂಕರ್ ಪ್ರಸಾದ್ ಹಾಗೂ ಆಹಾರ ಸಂಸ್ಕರಣಾ ಸಚಿವ ಹರ್ಸಿಮೃತ್ ಕೌರ್ ಬಾದಲ್ ರಾಜಕೀಯ ವ್ಯವಹಾರಗಳ ಸಮಿತಿಗೆ ಹೊಸ ಸೇರ್ಪಡೆಯಾಗಿದ್ದಾರೆ.
ಆರ್ಥಿಕ ವ್ಯವಹಾರಗಳ ಸಮಿತಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಅನಂತ್ ಕುಮಾರ್ ಅವರನ್ನು ಸೇರಿಸಲಾಗಿದೆ.