ಆರ್ಎಸ್ಪಿಎಲ್ ಅಧಿಕಾರಿಗಳಿಗೆ ಜೈಲು ಶಿಕ್ಷೆ
ಹೊಸದಿಲ್ಲಿ,ಜು.27: ಕಲ್ಲಿದ್ದಲು ಹಗರಣ ಪ್ರಕರಣವೊಂದರಲ್ಲಿ ರಥಿ ಸ್ಟೀಲ್ ಆ್ಯಂಡ್ ಪವರ್ ಲಿ.(ಆರ್ಎಸ್ಪಿಎಲ್)ನ ಮೂವರು ಅಧಿಕಾರಿಗಳಿಗೆ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಬುಧವಾರ ವಿವಿಧ ಪ್ರಮಾಣದ ಜೈಲುಶಿಕ್ಷೆ ವಿಧಿಸಿದೆ. ಕಂಪೆನಿಗೆ ಛತ್ತೀಸ್ಗಡದಲ್ಲಿನ ಕೆಸ್ಲಾ ಉತ್ತರ ಕಲ್ಲಿದ್ದಲು ಗಣಿಯ ಮಂಜೂರಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಂಗಳವಾರ ಈ ಅಧಿಕಾರಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ ಅವರು ಆರ್ಎಸ್ಪಿಎಲ್ನ ಸಿಇಒ ಉದಿತ್ ರಥಿ ಮತ್ತು ಎಂ.ಡಿ. ಪ್ರದೀಪ್ ರಥಿ ಅವರಿಗೆ 3 ವರ್ಷಗಳ ಮತ್ತು ಎಜಿಎಂ ಕುಶಲ್ ಅಗರವಾಲ್ ಅವರಿಗೆ 1 ವರ್ಷದ ಜೈಲು ಶಿಕ್ಷೆಯನ್ನು ಪ್ರಕಟಿಸಿದರು.
ನ್ಯಾಯಾಲಯವು ಆರ್ಎಸ್ಪಿಎಲ್ ಮತ್ತು ಉದಿತ್ ರಥಿಗೆ ತಲಾ 50 ಲಕ್ಷ ರೂ.,ಪ್ರದೀಪ್ ರಥಿಗೆ 25 ಲ.ರೂ. ಮತ್ತು ಅಗರವಾಲ್ಗೆ ಐದು ಲ.ರೂ. ದಂಡವನ್ನೂ ವಿಧಿಸಿತು.
ಇದು ಕಲ್ಲಿದ್ದಲು ಹಗರಣದಲ್ಲಿ ಅಪರಾಧ ಸಾಬೀತಾಗಿರುವ 2ನೇ ಪ್ರಕರಣವಾಗಿದೆ. ಈ ಅಧಿಕಾರಿಗಳು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೆದುರಿನಲ್ಲಿಯೂ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸರಕಾರವನ್ನು ವಂಚಿಸಿದ್ದನ್ನು ನ್ಯಾಯಾಲಯವು ಮಂಗಳವಾರ ಎತ್ತಿ ಹಿಡಿದಿತ್ತು.