ತಮಿಳ್ನಾಡು: ಮಾಜಿ ಸಚಿವ ಸೆಂಥಿಲ್ರಿಂದ ಉದ್ಯೋಗ ಕೊಡಿಸುವ ಭರವಸೆ ನೀಡಿ 60ಲಕ್ಷ ರೂ.ವಂಚನೆ?
ಚೆನ್ನೈ,ಆ.8: ಅಣ್ಣಾ ಡಿಎಂಕೆಯ ನಾಯಕ ಹಾಗೂ ಮಾಜಿ ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ, ಸಾರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಅರುವತ್ತು ಲಕ್ಷ ರೂಪಾಯಿ ವಂಚಿಸಿದ್ದಾರೆಂದು ಮದ್ರಾಸ್ ಹೈಕೋರ್ಟ್ಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ. 2014ರಲ್ಲಿ 38 ಮಂದಿಯಿಂದ ಅರುವತ್ತು ಲಕ್ಷ ರೂಪಾಯಿ ಸಂಗ್ರಹಿಸಿ ವಂಚಿಸಲಾಗಿದ್ದು, ಸಚಿವರಿಗೆ ಮಧ್ಯವರ್ತಿಗಳಾಗಿ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಅಧಿಕಾರಿಗಳಾದ ಬಾಬು , ರಂಗರಾಜನ್ ಎಂಬವರು ಕೆಲಸಮಾಡಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ ಎಂದು ವರದಿಯಾಗಿದೆ. ಹೈಕೋರ್ಟ್ಗೆ ದೂರು ನೀಡಿರುವ ತಮಿಳ್ನಾಡು ಸಾರಿಗೆ ಸಂಸ್ಥೆಯ ಉದ್ಯೋಗಿ ಸುಬ್ಬಯ್ಯ ಎಂಬವರು ಮಾಜಿ ಸಚಿವರ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಹಣವನ್ನು ಸಂಗ್ರಹಿಸಿ ಹಿರಿಯ ಅಧಿಕಾರಿಯಾದ ಬಾಬುವಿಗೆ ಹಸ್ತಾಂತರಿಸಲಾಗಿದೆಎಂದು ಹೇಳುತ್ತಿದ್ದಾರೆಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಹಣ ಕೊಟ್ಟಿರುವ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದೆಂದು ಬಾಬು ಭರವಸೆ ನೀಡಿದ್ದರು. ನೇಮಕಾತಿಗೆ ಸಂಬಂಧಿಸಿ ತಾನು ಅಂದಿನ ಸಚಿವರಾಗಿದ್ದ ಸೆಂಥಿಲ್ ಬಾಲಾಜಿಯವರೊಡನೆ ಮಾತಾಡಿದ್ದೇನೆ ಎಂದು ಬಾಬು ಹೇಳಿದ್ದರು. ಈ ನಡುವೆ ಬಾಬು ನಿವೃತ್ತರಾಗಿದ್ದು ಆಸ್ಥಾನಕ್ಕೆ ರಂಗರಾಜನ್ ಬಂದಿದ್ದಾರೆ. ಆ ನಂತರ ಕೆಲವೇ ಮಂದಿಗೆ ನೇಮಕಾತಿ ನೀಡಲಾಯಿತು.ಆದರೆ, ಅದು ಅನಧಿಕೃತ ನೇಮಕಾತಿಯಾಗಿತ್ತೆಂದು ನಂತರ ತಿಳಿದು ಬಂದಿದೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಸುಬ್ಬಯ್ಯ ವಿವರಿಸಿದ್ದಾರೆಂದು ವರದಿಯಾಗಿದೆ.