ಇಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರ ಜೀವನಸಖಿಯಾಗಲಿದ್ದಾರೆ ಗಗನಸಖಿ ರಚನಾ

Update: 2016-08-09 06:30 GMT

ಕೋಲ್ಕತ್ತಾ, ಅ.9: ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಇಂದು ಜೆಟ್ ಏರ್‌ವೇಸ್‌ನ ಗಗನಸಖಿ ರಚನಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ. ಅಂದ ಹಾಗೆ ಅವರಿಬ್ಬರದು ಆಗಸದಲ್ಲಿ ಅರಳಿದ ಪ್ರೀತಿ. ರಚನಾ ಮೂಲತಃ ಪಂಜಾಬ್ ರಾಜ್ಯದ ಜಲಂಧರ್‌ನವರಾದರೂ ಕಳೆದೆರಡು ವರ್ಷಗಳಿಂದ ಅವರ ಕುಟುಂಬ ಕೋಲ್ಕತ್ತಾದಲ್ಲಿ ವಾಸಿಸುತ್ತಿದೆ.

ಬಾಬುಲ್ ಹಾಗೂ ರಚನಾ ಅವರು ಪ್ರಥಮ ಬಾರಿ ಭೇಟಿಯಾಗಿದ್ದು 2014ರಲ್ಲಿ ಅದು ಕೂಡ ಜೆಟ್ ಏರ್ ವೇಸ್ ವಿಮಾನದಲ್ಲಿ. ಆ ಸಂದರ್ಭ ರಚನಾರೊಂದಿಗೆ ಮಾತುಕತೆಗಿಳಿದ ಬಾಬುಲ್, ಅವರ ಹೆಸರು ಹಾಗೂ ಫೋನ್ ನಂಬರ್ ಕೇಳಿದ್ದರು. ಅಂದಿನಿಂದ ಆರಂಭವಾದ ಪ್ರೀತಿ ಇಂದು ವಿವಾಹವಾಗುವ ತನಕ ಮುಂದುವರಿದಿದೆ. ಮೂಲತಃ ಗಾಯಕರಾಗಿರುವ ಬಾಬುಲ್ ತಾವು ಯೋಗ ಗುರು ಬಾಬಾ ರಾಮ್ ದೇವ್ ಅವರನ್ನೂ ವಿಮಾನದಲ್ಲಿಯೇ ಮೊದಲು 2014 ರಲ್ಲಿ ಭೇಟಿಯಾಗಿದ್ದು ಎಂದು ನೆನಪಿಸುತ್ತಾರೆ. ರಾಮ್ ದೇವ್ ಅವರೇ ತಮ್ಮನ್ನು ರಾಜಕೀಯಕ್ಕೆ ತಂದಿದ್ದು ಎಂದು ಹೇಳುವ ಅವರು ಈ ನಡುವೆ ತಮಗೆ ಲೋಕಸಭಾ ಟಿಕೆಟ್ ದೊರೆತರೆ ನಾನು ಖಂಡಿತವಾಗಿಯೂ ವಿಜಯಿಯಾಗುತ್ತೇನೆಂದು ರಚನಾ ಹೇಳಿದ್ದರೆಂದು ವಿವರಿಸುತ್ತಾರೆ.

ಅವರಿಬ್ಬರ ವಿವಾಹಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಚಿತವಾಗಿಯೇ ಉಡುಗೊರೆ ನೀಡಿದ್ದಾರೆ. ವಿವಾಹದ ಪ್ರಯುಕ್ತ ತಮಗೆ ಬಂಗಾಳ ಭವನ (ಈಗ ಭಾನ್ಗೋ ಭವನ್) ದಲ್ಲಿ ಕೆಲ ಕೊಠಡಿಗಳ ಅಗತ್ಯವಿದೆಯೆಂದು ಬಾಬುಲ್ ವಿನಂತಿಸಿದ್ದೇ ತಡ ಮಮತಾ ಸುಮಾರು 10 ಕೊಠಡಿಗಳನ್ನು ಅವರಿಗಾಗಿ ಮೀಸಲಿರಿಸಿ ಇದು ಅವರಿಗೆ ತಮ್ಮ ಪಾಲಿನ ವಿವಾಹದ ಉಡಗೊರೆಯೆಂದು ಹೇಳಿದ್ದಾರೆ.

ಅಂದ ಹಾಗೆ ಇದು ಬಾಬುಲ್ ಅವರಿಗೆ ಎರಡನೆ ವಿವಾಹ. ಅವರು 1995 ರಲ್ಲಿ ರಿಯಾ ಎಂಬವರನ್ನು ವಿವಾಹವಾಗಿದ್ದು 2006ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು. ಅವರಿಬ್ಬರಿಗೆ 14 ವರ್ಷದ ಪುತ್ರಿಯೊಬ್ಬಳಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News