ಮನೆಯೊಳಗೆ ಪ್ರಾರ್ಥನಾ ನಿರತ ಕ್ರೈಸ್ತ ಕುಟುಂಬದ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ!

Update: 2016-08-20 09:27 GMT

ಕಣ್ಣೂರು, ಆಗಸ್ಟ್ 20: ಮನೆಯೊಳಗೆ ಪ್ರಾರ್ಥನೆ ನಡೆಸುತ್ತಿದ್ದ ಕ್ರೈಸ್ತ ಕುಟುಂಬ ಮತ್ತು ಪಾಸ್ಟರ್‌ರನ್ನು ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆಂದು ದೂರು ದಾಖಲಾಗಿದೆ. ಕಣ್ಣೂರು ಪುದಿಯ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಗೆ ಸಂಬಧಿಸಿ ಅರ್ಜುನ್(26),ರಾಹುಲ್(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.

ಕಾಟ್ಟಾಂಬಳ್ಳಿ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ವಾಸವಿರುವ ಅನೀಷ್ ಎಂಬವರ ಮನೆಗೆ ದಾಳಿ ನಡೆದಿದ್ದು, ಅನೀಷ್ ಮತ್ತು ಕುಟುಂಬ ಎಂಟು ವರ್ಷಗಳ ಹಿಂದೆ ಕ್ರೈಸ್ತಧರ್ಮವನ್ನು ಸ್ವೀಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನೀಷ್ ವಿದೇಶದಲ್ಲಿ ದುಡಿಯುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೆ ಊರಿಗೆ ಮರಳಿದ್ದರು. ಶನಿವಾರ ಅವರು ಮರಳಿ ವಿದೇಶಕ್ಕೆ ಹೋಗಬೇಕಿತ್ತು. ಈನಡುವೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಕ್ಕೆ ಮೊದಲು ಅನೀಷ್ ಮತ್ತು ಅವರಿಗೆ ನಿಕಟ ಸಂಪರ್ಕವಿದ್ದ ಪಾಸ್ಟರ್‌ರನ್ನು ಮತ್ತು ಇತರ ಗೆಳೆಯರನ್ನು ಮನೆಗೆ ಕರೆದಿದ್ದರು. ಇವರೆಲ್ಲ ಸೇರಿ ಶುಕ್ರವಾರ ಮನೆಯಲ್ಲಿ ಪ್ರಾರ್ಥಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ತಂಡವೊಂದು ಮತಾಂತರ ಯತ್ನ ಇಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಉಳಿದವರು ತಪ್ಪಿಸಿಕೊಂಡಿದ್ದಾರೆ. ಹತ್ತು ಮಂದಿಯ ವಿರುದ್ಧ ಕೋಮುವಾದ ಬೆಳೆಸುತ್ತಿದ್ದಾರೆಂದು ಆರೋಪಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News