ಈ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಮಾಜಿ ಕ್ರಿಕೆಟಿಗ ಅಝರುದ್ದೀನ್
ಹೈದರಾಬಾದ್, ಜ. 2: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಕಾರ್ಯಕಾರಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮುಹಮ್ಮದ್ ಅಝರುದ್ದೀನ್ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಸೇರಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅವರಿಗೆ ಲೋಕಸಭೆಗೆ ಸಿಕಂದರಾಬಾದ್ನಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇತ್ತೀಚೆಗೆ ಟಿಪಿಸಿಸಿಗೆ ಸೇರಿದ ಕಾಂಗ್ರೆಸ್ನ ಮಾಜಿ ನಾಯಕ ಅಝರುದ್ದೀನ್ ಟಿಆರ್ಎಸ್ ಸೇರಲಿರುವ ಮಾಹಿತಿಯನ್ನು ಅವರ ನಿಕಟವರ್ತಿ ಮೂಲಗಳು ದೃಢಪಡಿಸಿದೆ. ಅಝರುದ್ದೀನ್ ಅವರು ಟಿಆರ್ಎಸ್ಗೆ ಸೇರುವ ಬಗ್ಗೆ ಟಿಆರ್ಎಸ್ ನಾಯಕತ್ವದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅನಿವಾಸಿ ಭಾರತೀಯರೊಬ್ಬರು ತಿಳಿಸಿದ್ದಾರೆ. ಈ ಬೆಳವಣಿಗೆಗೆ ಟಿಆರ್ಎಸ್ ವರಿಷ್ಠ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯ ಕೆಲವೇ ಸಮಯ ಹಿಂದೆ ಅಜರುದ್ದೀನ್ ಅವರನ್ನು ಟಿಪಿಸಿಸಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರನ್ನು ಮಲ್ಕಾಜ್ಗಿರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ತೆಲಂಗಾಣ ಕಾಂಗ್ರೆಸ್ ಯೋಜಿಸಿತ್ತು. ಆದರೆ ಅವರು ಟಿಆರ್ಎಸ್ಗೆ ಸೇರುತ್ತಿರುವುದು ಟಿಪಿಸಿಸಿಗೆ ಆಘಾತ ಉಂಟು ಮಾಡಿದೆ.