ನನ್ನ ಪುತ್ರನನ್ನು ಕೊಲ್ಲುವುದಾಗಿ ರವಿ ಪೂಜಾರಿ ಬೆದರಿಸಿದ್ದ ಎಂದ ಶಾಸಕ!
ತಿರುವನಂತಪುರಂ, ಫೆ.7: ತನ್ನ ಪುತ್ರನನ್ನು ಕೊಲ್ಲುವುದಾಗಿ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿತ್ತು ಎಂದು ಕೇರಳದ ಶಾಸಕ ಪಿಸಿ ಜಾರ್ಜ್ ಹೇಳಿದ್ದಾರೆ. ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದೆ.
ಕ್ರೈಸ್ತ ಸನ್ಯಾಸಿನಿಯೋರ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತರಾಗಿದ್ದ ಬಿಷಪ್ ಫ್ರಾಂಕೊ ಮುಲ್ಲಕಲ್ ಅವರಿಗೆ ತಾನು ಬೆಂಬಲ ಸೂಚಿಸಿದ್ದೆ. ಬಿಷಪ್ ಪರ ವಹಿಸಿದ್ದಕ್ಕೆ ತನ್ನನ್ನು ಗುರಿಯಾಗಿಸಿಕೊಳ್ಳಲಾಯಿತು. ಪ್ರಥಮವಾಗಿ ಕರೆ ಮಾಡಿದಾತ ತನ್ನನ್ನು ರವಿಪೂಜಾರಿ ಎಂದು ಪರಿಚಯಿಸಿಕೊಂಡಿದ್ದ. ನಂತರ ಇದೇ ನಂಬರ್ನಿಂದ ಕರೆ ಮಾಡಿದ್ದ ವ್ಯಕ್ತಿ ಮಲಯಾಳಂನಲ್ಲಿ ಮಾತನಾಡಿದ್ದು , ತನಗೆ ರವಿ ಪೂಜಾರಿ ಒಂದು ಕೆಲಸ ವಹಿಸಿಕೊಟ್ಟಿರುವುದಾಗಿ ತಿಳಿಸಿದ್ದ ಎಂದು ಶಾಸಕರು ಹೇಳಿದ್ದಾರೆ.
ತಕ್ಷಣ ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಪೊಲೀಸರ ಗಮನಕ್ಕೆ ತಂದಿರುವುದಾಗಿ ಅವರು ತಿಳಿಸಿದ್ದಾರೆ. ಎರಡೂ ಬಾರಿ ಅವರು ತನ್ನನ್ನು ನಿಂದಿಸಿದ್ದು ಪುತ್ರನನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ಆದರೆ ತಾನು ಕೂಡಾ ಸೂಕ್ತವಾಗಿ ಪ್ರತ್ಯುತ್ತರ ನೀಡಿದ್ದೆ. ಬಳಿಕ ತನ್ನ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಅಲ್ಲದೆ ಎರಡೂ ಕರೆಗಳನ್ನು ದಕ್ಷಿಣ ಆಫ್ರಿಕಾದಿಂದ ಮಾಡಲಾಗಿದೆ ಮತ್ತು ಕರೆ ಮಾಡಿದಾತ ರವಿ ಪೂಜಾರಿ ಹೌದು ಎಂಬುದು ಬಳಿಕ ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು ಎಂದು ಶಾಸಕರು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಕೊಚ್ಚಿಯಲ್ಲಿರುವ ನಟಿ ಲೀನಾ ಮರಿಯಾ ಪೌಲ್ ಮಾಲಕತ್ವದ ಬ್ಯೂಟಿಪಾರ್ಲರ್ನ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಇದು ರವಿ ಪೂಜಾರಿ ಗ್ಯಾಂಗ್ನ ಕೃತ್ಯವಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದರು. ರವಿ ಪೂಜಾರಿ ಸೆನೆಗಲ್ನಲ್ಲಿ ಈಗ ಬಂಧಿತನಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಮುಂದುವರಿದಿದೆ.