ಮುಂಗಾರು ಮಳೆ ನಾಲ್ಕು ದಿನ ವಿಳಂಬ ಸಾಧ್ಯತೆ: ಜೂ.5ರಂದು ಕೇರಳಕ್ಕೆ ಮಳೆರಾಯನ ಆಗಮನ

Update: 2020-05-15 15:00 GMT

ಹೊಸದಿಲ್ಲಿ, ಮೇ 15: ಸಾಮಾನ್ಯವಾಗಿ ಜೂ.1ರಂದು ಕೇರಳವನ್ನು ತಲುಪುತ್ತಿದ್ದ ನೈರುತ್ಯ ಮುಂಗಾರು ಮಳೆ ಈ ವರ್ಷ ನಾಲ್ಕು ದಿನಗಳಷ್ಟು ವಿಳಂಬವಾಗಿ,ಜೂ.5ರಂದು ರಾಜ್ಯವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶುಕ್ರವಾರ ತಿಳಿಸಿದೆ.ಈ ವರ್ಷ ದೇಶಾದ್ಯಂತ ಸಾಮಾನ್ಯ ಮಳೆಯಾಗಲಿದೆ ಎಂದು ಅದು ಹೇಳಿದೆ.

ಕೇರಳಕ್ಕೆ ಮಳೆರಾಯನ ಆಗಮನದೊಡನೆ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಮಳೆಗಾಲ ಆರಂಭಗೊಳ್ಳುತ್ತದೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವುದರಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೊಸದಾಗಿ ನಿಗದಿತ ದಿನಾಂಕವಾಗಿರುವ ಮೇ 22ಕ್ಕೆ ಆರು ದಿನಗಳ ಮೊದಲೇ ಅಂದರೆ ಮೇ 16ರಂದು ಮಳೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷವೂ ಆಗಿನ ನಿಗದಿತ ದಿನಾಂಕವಾಗಿದ್ದ ಮೇ 20ಕ್ಕೆ ಎರಡು ದಿನಗಳ ಮೊದಲೇ ಮೇ 18ರಂದು ಈ ಪ್ರದೇಶದಲ್ಲಿ ಮಳೆಯಾಗಿತ್ತು. ಆದರೆ ಮಂದಗತಿಯ ಚಲನೆಯಿಂದಾಗಿ ಅದು ಕೇರಳವನ್ನು ಜೂ.8ರಂದು ತಲುಪಿತ್ತು ಮತ್ತು ಜು.19ರ ವೇಳೆಗೆ ಇಡೀ ದೇಶವನ್ನು ವ್ಯಾಪಿಸಿತ್ತು.

 ಈ ವರ್ಷ ಐಎಂಡಿಯು 1960ರಿಂದ 2019ರವರೆಗಿನ ಅಂಕಿಅಂಶಗಳನ್ನು ಆಧರಿಸಿ ದೇಶದ ವಿವಿಧ ಭಾಗಗಳಲ್ಲಿ ಮಳೆ ಆರಂಭಗೊಳ್ಳುವ ಮತ್ತು ಅಂತ್ಯಗೊಳ್ಳುವ ದಿನಾಂಕಗಳನ್ನು ಪರಿಷ್ಕರಿಸಿದೆ. ಹಿಂದಿನ ದಿನಾಂಕಗಳು 1901ರಿಂದ 1940ರವರೆಗಿನ ಅಂಕಿಅಂಶಗಳನ್ನು ಆಧರಿಸಿದ್ದ ವು. ಆದರೆ ಕೇರಳದಲ್ಲಿ ಮಳೆಗಾಲ ಆರಂಭಗೊಳ್ಳುವ ದಿನಾಂಕ (ಜೂ.1) ಬದಲಾಗಿಲ್ಲ.

ಪರಿಷ್ಕೃತ ದಿನಾಂಕಗಳಂತೆ ವಿವಿಧ ರಾಜ್ಯಗಳಲ್ಲಿ ಎಂದಿನ ದಿನಾಂಕಗಳಿಗೆ ಹೋಲಿಸಿದರೆ ಒಂದರಿಂದ ಏಳು ದಿನಗಳ ಕಾಲ ವಿಳಂಬವಾಗಿ ಮಳೆ ಆರಂಭವಾಗಲಿದೆ.

ಆದರೆ ವಾಯುವ್ಯ ಭಾರತದ ಅಂಚಿನ ಪ್ರದೇಶಗಳಲ್ಲಿ ಎಂದಿನ ದಿನಾಂಕವಾದ ಜು.15ಕ್ಕೆ ಹೋಲಿಸಿದರೆ ಒಂದು ವಾರ ಮೊದಲೇ ಜು.8ರಂದು ಮಳೆ ಆರಂಭಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ಮಳೆಗಾಲ ಅಂತ್ಯಗೊಳ್ಳುವ ನೂತನ ದಿನಾಂಕವನ್ನು ಅ.15ಕ್ಕೆ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News