8 ವರ್ಷದಲ್ಲಿ ಬಿಜೆಪಿ ಎಷ್ಟು ಕಾಶ್ಮೀರ ಪಂಡಿತರಿಗೆ ಪುನರ್ವಸತಿ ಕಲ್ಪಿಸಿದೆ?: ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ಕಾಶ್ಮೀರಿ ಪಂಡಿತರ ನೋವನ್ನು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಎಷ್ಟು ಮಂದಿ ನಿರಾಶ್ರಿತ ಪಂಡಿತರಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಿಕೊಟ್ಟಿದೆ ಎಂದು ಪ್ರಶ್ನಿಸಿದ್ದಾರೆ.
ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಕುರಿತಂತೆ ಎಎಪಿ ಹಾಗೂ ಬಿಜೆಪಿ ನಡುವಿನ ಜಟಾಪಟಿಯಲ್ಲಿ, ʼಚಿತ್ರವನ್ನು ಯೂಟ್ಯೂಬ್ ನಲ್ಲಿ ಹಾಕಿ, ಎಲ್ಲರೂ ಉಚಿತವಾಗಿ ನೋಡುವಂತೆ ಮಾಡಿʼ ಎಂದು ಕೇಜ್ರೀವಾಲ್ ಸಲಹೆ ನೀಡಿದ್ದರು.
ಚಿತ್ರದ ಕುರಿತ ತಮ್ಮ ಪ್ರತಿಕ್ರಿಯೆಗೆ ಬಿಜೆಪಿಯ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 25 ವರ್ಷಗಳಲ್ಲಿ, ಕಾಶ್ಮೀರಿ ಪಂಡಿತರ ನಿರ್ಗಮನದ ನಂತರ, ಕಳೆದ ಎಂಟು ವರ್ಷಗಳು ಸೇರಿದಂತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದ 13 ವರ್ಷಗಳಲ್ಲಿ ಈ ಅವಧಿಯಲ್ಲಿ ಯಾವುದೇ ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಪುನರ್ವಸತಿ ನೀಡಲಾಗಿದೆಯೇ? ಒಂದೇ ಒಂದು ಕುಟುಂಬವೂ ಕಾಶ್ಮೀರಕ್ಕೆ ಹಿಂತಿರುಗಿಲ್ಲ." ಎಂದು ಹೇಳಿದ್ದಾರೆ.
ಕಾಶ್ಮೀರ್ ಫೈಲ್ಸ್ ಸುಮಾರು 200 ಕೋಟಿ ರುಪಾಯಿಗಳಷ್ಟು ಗಳಿಸಿದೆ. ಯಾರದ್ದಾದರೂ ನೋವಿನಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳಲು ನೋಡುತ್ತದೆ ಎಂದು ಅವರು ಟೀಕಿಸಿದ್ದಾರೆ.
ʼಇದು ಅಪರಾಧ. ದೇಶ ಇದನ್ನು ಸಹಿಸಲ್ಲ. ಈ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ, ಎಲ್ಲರೂ ಉಚಿತವಾಗಿ ನೋಡಲಿ. ಇದರಿಂದ ಗಳಿಸಿದ ಹಣವನ್ನು ಕಾಶ್ಮೀರಿ ಪಂಡಿತರ ಅಭಿವೃದ್ಧಿಗೆ ವಿನಿಯೋಗಿಸಲಿ ಎಂದು ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದ್ದಾರೆ.
ಅಲ್ಲದೆ, ಬಿಜೆಪಿ ನಾಯಕರು ಈ ಚಿತ್ರವನ್ನು ಪ್ರಚಾರ ಮಾಡುತ್ತಿರುವುದನ್ನೂ ಕೇಜ್ರೀವಾಲ್ ಖಂಡಿಸಿದ್ದಾರೆ.