ಕೇಂದ್ರೀಯ ವಿ.ವಿ.ಗಳಲ್ಲಿ 5 ವರ್ಷಗಳಲ್ಲಿ 24 ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣ ವರದಿ: ಸರಕಾರ

Update: 2022-04-04 17:46 GMT

ಹೊಸದಿಲ್ಲಿ, ಎ. 3: 2017ರಿಂದ ಕೇಂದ್ರೀಯ ವಿಶ್ವವಿದ್ಯಾನಿಲಯಗಳ 24ಕ್ಕೂ ಅಧಿಕ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರದ ಸಹಾಯಕ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಲೋಕಸಭೆಯಲ್ಲಿ ಸೋಮವಾರ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ತಾರತಮ್ಯ ಹಾಗೂ ಕಿರುಕುಳದ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ತನ್ನ ವ್ಯಾಪ್ತಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ 2017ರಿಂದ 2022ರ ನಡುವೆ 24 ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಯುಜಿಸಿ ಮಾಹಿತಿ ನೀಡಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳನ್ನು ದಾಖಲಿಸಲಾಗಿಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ತಿಳಿಸಿದ್ದಾರೆ.

2018 ನವೆಂಬರ್ನಿಂದ 2021 ಅಕ್ಟೋಬರ್ ನಡುವೆ ತೀರ್ಥಂಕರ ಮಹಾವೀರ ವಿಶ್ವವಿದ್ಯಾನಿಲಯ, ಮೊರದಾಬಾದ್, ಉತ್ತರಪದೇಶದಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳು ವರದಿಯಾಗಿವೆ ಎಂದು ಯುಜಿಸಿ ಮಾಹಿತಿ ನೀಡಿದೆ ಎಂದು ಸಿಂಗ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ) 2019ರಲ್ಲಿ ನಿಯಮಗಳನ್ನು ರೂಪಿಸಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ಪಿಡುಗನ್ನು ತಡೆಗಟ್ಟಲು ಯುಜಿಸಿ ನಿಯಮಗಳನ್ನು ಅಧಿಸೂಚಿಸಿತ್ತು. ಅಲ್ಲದೆ, ನಿಯಮಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸುವಂತೆ ಸುತ್ತೋಲೆ ಹೊಡಿಸಿತ್ತು ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News