ಜಹಾಂಗಿರ್ಪುರಿ ಹಿಂಸಾಚಾರ ಪ್ರಧಾನ ಆರೋಪಿ ಬಿಜೆಪಿ ನಾಯಕ: ಆಪ್ ಆರೋಪ
Update: 2022-04-19 18:03 GMT
ಹೊಸದಿಲ್ಲಿ, ಎ. 19: ದಿಲ್ಲಿಯ ಜಹಾಂಗಿರ್ಪುರಿಯಲ್ಲಿ ನಡೆದ ಹಿಂಸಾಚಾರದ ಆರೋಪಿಗಳಲ್ಲಿ ಓರ್ವ ಬಿಜೆಪಿ ನಾಯಕ ಎಂದು ಆಮ್ ಆದ್ಮಿ ಪಕ್ಷದ ಶಾಸಕಿ ಅತೀಶ್ ಮರ್ಲೇನಾ ಮಂಗಳವಾರ ಆರೋಪಿಸಿದ್ದಾರೆ. ‘‘ಜಹಾಂಗಿರ್ಪುರಿ ಗಲಭೆಯ ಪ್ರಧಾನ ಆರೋಪಿ ಅನ್ಸಾರ್ ಬಿಜೆಪಿ ನಾಯಕ’’ ಎಂದು ಮರ್ಲೇನಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ. ಟ್ವೀಟ್ನಲ್ಲಿ ಅನ್ಸಾರ್ ಬಿಜೆಪಿ ನಾಯಕರೊಂದಿಗೆ ಇರುವ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಹನುಮಾನ್ ಜಯಂತಿಯ ಹಿನ್ನೆಲೆಯಲ್ಲಿ ಎಪ್ರಿಲ್ 16ರಂದು ನಡೆದ ಮೆರವಣಿಗೆಯ ಸಂದರ್ಭ ಜಹಾಂಗಿರ್ಪುರಿ ಪ್ರದೇಶದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಗಲಭೆಗೆ ಬಿಜೆಪಿ ಪ್ರಚೋದನೆ ನೀಡಿದೆ ಎಂಬುದು ಸ್ಪಷ್ಟ. ಬಿಜೆಪಿ ದಿಲ್ಲಿಯ ಜನರಲ್ಲಿ ಕ್ಷಮೆ ಕೋರಬೇಕು. ಬಿಜೆಪಿ ಗೂಂಡಾಗಳ ಪಕ್ಷ’’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.