ಅಭಿಮಾನಿಗಳ ತೀವ್ರ ಆಕ್ರೋಶದ ಬಳಿಕ "ತಂಬಾಕು ರಾಯಭಾರಿಯಾಗುವುದಿಲ್ಲ" ಎಂದ ಅಕ್ಷಯ್ ಕುಮಾರ್
ಹೊಸದಿಲ್ಲಿ: ಪಾನ್ ಮಸಾಲಾ ಬ್ರಾಂಡ್ನೊಂದಿಗಿನ ನಂಟಿಗಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಟ್ರೋಲ್ ಆಗಿದ್ದರು. ತನ್ನ ಅಭಿಮಾನಿಗಳಿಂದ ತೀವ್ರ ಆಕ್ರೋಶ ಎದುರಿಸಿದ ನಂತರ, ನಟ ಈಗ ತಾನು ಸಹಿ ಮಾಡಿದ ತಂಬಾಕು ಬ್ರಾಂಡ್ನ ರಾಯಭಾರಿಯಾಗುವುದಿಲ್ಲ ಎಂದು ಘೋಷಿಸಿದ್ದಾರೆ.
ಎಪ್ರಿಲ್ 21 ರ ಗುರುವಾರ ಮಧ್ಯರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವ ಮೂಲಕ ಅಕ್ಷಯ್ ಕುಮಾರ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದರು.
ಶಾರುಖ್ ಖಾನ್ ಹಾಗೂ ಅಜಯ್ ದೇವಗನ್ ಅವರ ನಂತರ ಪಾನ್ ಮಸಾಲಾ ಬ್ರಾಂಡ್ ಪ್ರೋಮೋಗಳನ್ನು ಸೇರಿದ ಇತ್ತೀಚಿನ ಬಾಲಿವುಡ್ ತಾರೆ ಅಕ್ಷಯ್ ಕುಮಾರ್.
ಇದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಆಗಿದೆ. ಅಕ್ಷಯ್ ನಿರ್ಧಾರವನ್ನು ಅಭಿಮಾನಿಗಳು ಸ್ವೀಕರಿಸಲಿಲ್ಲ. ಅಕ್ಷಯ್ ಈಗ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಬ್ರಾಂಡ್ನ ರಾಯಭಾರಿಯಾಗಿಯೂ ಹಿಂದೆ ಸರಿದಿದ್ದಾರೆ.
"ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಯು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಮತ್ತು ಅನುಮೋದಿಸುವುದಿಲ್ಲ, ವಿಮಲ್ ಎಲೈಚಿ ಯೊಂದಿಗಿನ ನನ್ನ ಒಡನಾಟದ ಹಿನ್ನೆಲೆಯಲ್ಲಿ ನಿಮ್ಮ ಭಾವನೆಗಳ ಹೊರಹರಿವನ್ನು ನಾನು ಗೌರವಿಸುತ್ತೇನೆ.. ಎಲ್ಲಾ ನಮ್ರತೆಯಿಂದ ನಾನು ಹಿಂದೆ ಸರಿಯುತ್ತೇನೆ’’ ಎಂದು ಅಕ್ಷಯ್ ಹೇಳಿದ್ದಾರೆ.