ದಲಿತ ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿ ಜೈಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2022-05-02 14:33 GMT
ಕನೌಜ್: ಉತ್ತರ ಪ್ರದೇಶದ ಕನೌಜ್ನಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರಗೈದ ಆರೋಪದ ಮೇಲೆ ಬಂಧಿತನಾಗಿದ್ದ 21 ವರ್ಷದ ಯುವಕನೊಬ್ಬ ರವಿವಾರ ಜೈಲಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ನೀರಿನ ಪೈಪಿಗೆ ಟವೆಲ್ ಒಂದನ್ನು ಬಳಸಿ ಆತ ನೇಣು ಬಿಗಿದು ಆತ್ಮಹತೈಗೈದ ಸ್ಥಿತಿಯಲ್ಲಿದ್ದುದನ್ನು ಜೈಲಿನ ವಾರ್ಡನ್ ನೋಡಿದ್ದಾರೆಂದು ಅಧೀಕ್ಷಕ ವಿಷ್ಣುಕಾಂತ್ ಮಿಶ್ರಾ ಹೇಳಿದ್ದಾರೆ. ಆರೋಪಿ ಅಭಿನವ್ ಆಲಿಯಾಸ್ ಪ್ರಖಾರ್ ಸಿಂಗ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಯಾಗಿದ್ದ.
ಜೈಲಿನಲ್ಲಿ ಎತ್ತರದ ಪ್ರದೇಶದಲ್ಲಿರುವ ನೀರಿನ ಪೈಪ್ಲೈನ್ ಆತ ಹೇಗೆ ತಲುಪಿದ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈ ಘಟನೆ ಕುರಿತು ಮೆಜಿಸ್ಟೀರಿಯಲ್ ತನಿಖೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಮಿಶ್ರಾ ಆದೇಶಿಸಿದ್ದಾರೆ.
ಇಂಟರ್ ಮೀಡಿಯೆಟ್ ಪರೀಕ್ಷೆ ಆರಂಭಗೊಂಡ ದಿನವಾದ ಮಾರ್ಚ್ 24ರಂದು ಸಿಂಗ್ನನ್ನು ಬಂಧಿಸಲಾಗಿತ್ತು. ವಿವಾಹವಾಗುವ ನೆಪವೊಡ್ಡಿ ಆತ ಅತ್ಯಾಚಾರವೆಸಗಿದ್ದ ಎಂದು ದಲಿತ ಬಾಲಕಿ ಆರೋಪಿಸಿದ್ದಳು.