ಶ್ರೀನಗರ: ಶಂಕಿತ ಉಗ್ರರಿಂದ ಗುಂಡಿನ ದಾಳಿ; ಪೊಲೀಸ್ ಕಾನ್‌ಸ್ಟೇಬಲ್ ಸೈಫುಲ್ಲಾ ಖಾದ್ರಿ ಹುತಾತ್ಮ

Update: 2022-05-24 18:43 GMT

ಶ್ರೀನಗರ: ಶ್ರೀನಗರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವರನ್ನು ಶಂಕಿತ ಉಗ್ರರು ಮಂಗಳವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಅವರ 7 ವರ್ಷದ ಪುತ್ರಿ ಗಾಯಗೊಂಡಿದ್ದಾರೆ.

ಹುತಾತ್ಮರಾದ ಪೊಲೀಸ್ ಕಾನ್‌ಸ್ಟೇಬಲ್ ಅನ್ನು ಸೈಫುಲ್ಲಾ ಖಾದ್ರಿ ಎಂದು ಗುರುತಿಸಲಾಗಿದೆ. ಇವರು ಅಂಚಾರ್ ಪ್ರದೇಶದ ಸೌರಾದ ನಿವಾಸಿ. ಅವರನ್ನು ಅವರ ಮನೆಯಲ್ಲಿ ಶಂಕಿತ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಂಕಿತ ಉಗ್ರರು ದಾಳಿ ನಡೆಸಿದ ಸಂದರ್ಭ ಖಾದ್ರಿ ಅವರ ಪುತ್ರಿ ಅವರನ್ನು ಅಪ್ಪಿಕೊಂಡಿದ್ದಳು. ಇದರಿಂದ ಖಾದ್ರಿ ಅವರ ಪುತ್ರಿಗೆ ಗುಂಡಿನ ಗಾಯಗಳಾಗಿವೆ. ಆಕೆಯ ಸ್ಥಿತಿ ಸ್ಥಿರವಾಗಿದೆ.

ದಾಳಿಯಿಂದ ತೀವ್ರ ಗಾಯಗೊಂಡಿದ್ದ ಖಾದ್ರಿ ಅವರನ್ನು ಶೇರ್-ಎ-ಕಾಶ್ಮೀರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ, ಅವರು ಮೃತಪಟ್ಟಿದ್ದಾರೆ. ಖಾದ್ರಿ ಅವರ ಹತ್ಯೆಯ ಬಗ್ಗೆ ಕಾಶ್ಮೀರ ವಲಯದ ಐಜಿಪಿ ವಿಜಯ ಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಉಗ್ರರನ್ನು ಸೆರೆ ಹಿಡಿಯಲು ಸಮೀಪದ ಸ್ಥಳಗಳಿಗೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳಲ್ಲಿ ಪೊಲೀಸರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಘಟನೆ ಇದಾಗಿದೆ. ಮೇ 7ರಂದು ಉಗ್ರರು ಐವಾ ಸೇತುವೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದರು. ಮೇ 13ರಂದು ಪುಲ್ವಾಮ ಜಿಲ್ಲೆಯಲ್ಲಿ ಇನ್ನೋರ್ವ ಪೊಲೀಸ್ ಕಾನ್‌ಸ್ಟೇಬಲ್ ರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News