ಹಕ್ಕಿಯನ್ನು ಕಾಪಾಡಲೆಂದು ಕಾರಿನಿಂದ ಇಳಿದವರ ಮೇಲೆ ಹರಿದ ಟ್ಯಾಕ್ಸಿ; ಇಬ್ಬರು ಮೃತ್ಯು

Update: 2022-06-11 07:34 GMT
Twitter/ @singhvarun

ಮುಂಬೈ: ಬಾಂದ್ರಾ-ವೊರ್ಲಿ ಸೀ ಲಿಂಕ್ ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಹಕ್ಕಿಯೊಂದನ್ನು ರಕ್ಷಿಸಲೆಂದು ಕಾರಿನಿಂದ ಕೆಳಗಿಳಿದ 43 ವರ್ಷದ ಉದ್ಯಮಿ ಮತ್ತವರ ಚಾಲಕನಿಗೆ ಇನ್ನೊಂದು ಟ್ಯಾಕ್ಸಿ ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಮೇ 30ರಂದು ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಇಂದು ಹರಿದಾಡುತ್ತಿವೆ. ಅಮರ್ ಮನೀಶ್ ಜರಿವಾಲ ಎಂಬ ಉದ್ಯಮಿ ಮಲಾಡ್ ಕಡೆಗೆ ತೆರಳುತ್ತಿದ್ದರು. ಬಾಂದ್ರಾ ವೊರ್ಲಿ ಸೀ ಲಿಂಕ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಅವರ ಕಾರಿಗೆ ತಾಗಿ ಹಕ್ಕಿ ಗಾಯಗೊಂಡು ರಸ್ತೆಗೆ ಬಿತ್ತು. ಅದನ್ನು ರಕ್ಷಿಸಲೆಂದು ಜರಿವಾಲ ಮತ್ತವರ ಚಾಲಕ ಶ್ಯಾಮ್ ಸುಂದರ್ ಕಾಮತ್ ಕಾರಿನಿಂದ ಹೊರಗಿಳಿದಾಗ ವೇಗವಾಗಿ ಬಂದ ಇನ್ನೊಂದು ಟ್ಯಾಕ್ಸಿ ಅರೆಕ್ಷಣದಲ್ಲಿ ಅವರಿಗೆ ಢಿಕ್ಕಿ ಹೊಡೆದಿತ್ತು.  ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜರಿವಾಲ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಕಾಮತ್ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.

ಅಪಘಾತಕ್ಕೆ ಕಾರಣನಾದ ಟ್ಯಾಕ್ಸಿ ಚಾಲಕ ರವೀಂದ್ರ ಕುಮಾರ್ ಜೈಸ್ವಾರ್ (30) ಎಂಬಾತನನ್ನು ಬಂಧಿಸಲಾಗಿದ್ದು ನಿರ್ಲಕ್ಷ್ಯದಿಂದ ವೇಗವಾಗಿ ವಾಹನ ಚಲಾಯಿಸಿದ ಆರೋಪ ಆತನ ಮೇಲೆ ಹೊರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News