ಜಲಕ್ರಾಂತಿ ರೂವಾರಿ ಕಾಮೇಗೌಡರ ಪುತ್ರನಿಗೆ ನೌಕರಿಯನ್ನೇ ನೀಡಿಲ್ಲ

Update: 2022-10-18 03:17 GMT

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ 83 ವರ್ಷದ ಕಾಮೇಗೌಡ ಅವರ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಮನದ ಮಾತು’ ತಿಂಗಳ ಬಾನುಲಿ  ಕಾರ್ಯಕ್ರಮದಲ್ಲಿ ಶ್ಲಾಘಿಸಿದನ್ನು ಸ್ಮರಿಸಬಹುದು

ಬೆಂಗಳೂರು, ಅ.17: ಕ್ರಿಮಿನಲ್ ಹಿನ್ನೆಲೆ ಹೊಂದಿ ಹತ್ಯೆಗೀಡಾಗಿರುವ ಆರೋಪಿಗಳ ಕುಟುಂಬ ಸದಸ್ಯರಿಗೆ  ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಲಕ್ಷಾಂತರ ರೂ. ನೆರವು ಮತ್ತು ಅನುಕಂಪದ ಅಡಿಯಲ್ಲಿ ನೌಕರಿ ನೀಡಿರುವ ರಾಜ್ಯ ಬಿಜೆಪಿ ಸರಕಾರವು  ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್‌ನಲ್ಲಿ ಶ್ಲಾಘನೆಗೊಳಗಾಗಿದ್ದ ಮಂಡ್ಯ ಜಿಲ್ಲೆಯ ರೈತ ಮತ್ತು ಜಲಕ್ರಾಂತಿ ರೂವಾರಿ ಕಾಮೇಗೌಡ ಅವರ ಪುತ್ರನಿಗೆ ನೌಕರಿಯನ್ನೇ ನೀಡಿರಲಿಲ್ಲ.

ಅಲ್ಲದೇ ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ ಸೇರಿದಂತೆ ಮತ್ತಿತರ ವಿವರಗಳನ್ನೊಳಗೊಂಡ ವರದಿಯು 2 ವರ್ಷದಿಂದಲೂ ಸರಕಾರಕ್ಕೆ ಸಲ್ಲಿಕೆಯಾಗಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ನಿಧನರಾದ ಕಾಮೇಗೌಡ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಚಿವರೆಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿರುವ ಹೊತ್ತಿನಲ್ಲೇ ಅವರ ಮಗನಿಗೆ ನೌಕರಿ ನೀಡದೇ ಇರುವ ಸಂಗತಿಯು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ನಾಗರತ್ನ ಅವರು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಗೆ 2022ರ ಮಾರ್ಚ್ 18ರಂದು ಟಿಪ್ಪಣಿ ಹೊರಡಿಸಿದ್ದರು. ಇದರ ಪ್ರತಿಯು ''the-file.in''ಗೆ ಲಭ್ಯವಾಗಿದೆ. 
ಕಾಮೇಗೌಡ ಅವರ ಒಬ್ಬ ಮಗನಿಗೆ ಶಿಕ್ಷಣದ ಅರ್ಹತೆಗೆ ಅನುಗುಣವಾಗಿ ಸರಕಾರಿ ನೌಕರಿಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು 2020ರ ಜುಲೈ 2ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟಿಪ್ಪಣಿ ಹಾಕಿದ್ದರು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾಮೇಗೌಡ ಅವರ ಕುಟುಂಬದ ಸದಸ್ಯರ ವಿವರ ಮತ್ತು ಮಕ್ಕಳ ಶೈಕ್ಷಣಿಕ ಅರ್ಹತೆ, ಮಕ್ಕಳ ವಯಸ್ಸಿನ ಕುರಿತು ಮಾಹಿತಿ ಕೋರಿದ್ದರು.
ಕಾಮೇಗೌಡ ಅವರ ಒಬ್ಬ ಮಗನಾದ ಡಿ.ಕೆ.ಕೃಷ್ಣ ಅವರ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಕುರಿತಂತೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ ಮತ್ತೊಬ್ಬ ಮಗನಾದ ಡಿ.ಕೆ.ಬಲರಾಮ ಅವರು (41) ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ್ದರು. ಆದರೆ ಸರಕಾರವು ಡಿ.ಕೆ.ಬಲರಾಮ ಅವರಿಗೆ ಸರಕಾರಿ ನೌಕರಿ ನೀಡಲು ಕಾನೂನಿನ ತೊಡಕನ್ನು ಮುಂದಿರಿಸಿ ನಿರಾಕರಿಸಿದ್ದರು.
ಕರ್ನಾಟಕ ಸಿವಿಲ್ ಸೇವಾ (ದಿನಾಂಕ 18/12/2008ರ ಅಧಿಸೂಚನೆ ಸಂಖ್ಯೆ; ಡಿಪಿಎಆರ್ 42 ಎಸ್‌ಆರ್‌ಆರ್ 2008) (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ಕ್ಕೆ ತಿದ್ದುಪಡಿ ಮಾಡಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಡಿಪಿಎಆರ್ ಅಭಿಪ್ರಾಯ ನೀಡಿತ್ತು.
ಅಲ್ಲದೇ ‘ಕಾಮೇಗೌಡರ ಮಗನಾದ ಡಿ.ಕೆ.ಬಲರಾಮ್ ಅವರು ಪ್ರಸಕ್ತ 40 ವರ್ಷಗಳ ವಯೋಮಿತಿಯನ್ನು ತಲುಪಿರುವುದರಿಂದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೀರಿರುವುದರಿಂದ ಸರಕಾರಿ ಸೇವೆಗೆ ನೇಮಕಾತಿ ಮಾಡುವುದಕ್ಕೆ ನಿಯಮಗಳಲ್ಲಿ ಅವಕಾಶಗಳಿರುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೇವಾ ನಿಯಮಗಳ ವಿಭಾಗವು ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಮೇಗೌಡರ ಮಗನಾದ ಡಿ.ಕೆ.ಬಲರಾಮ ಅವರಿಗೆ 41 ವರ್ಷ ವಯೋಮಾನದವರಾಗಿರುವುದರಿಂದ ಸರಕಾರಿ ಸೇವೆಗೆ ನೇಮಕಾತಿ ಮಾಡಲು ನಿಯಮಾವಳಿಗಳಲ್ಲಿ ಅವಕಾಶವಿರುವುದಿಲ್ಲ’ ಎಂಬ ಅಂಶವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ತಮ್ಮ ಜಮೀನು ಮತ್ತು ಸಮೀಪದ ಜಾಗದಲ್ಲಿ 16 ಸಣ್ಣ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ನಂತರ ಅವರ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ, ಮತ್ತಿತರ ವಿವರಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವರದಿ ಕೇಳಿ ಮಂಡ್ಯ ಜಿಲ್ಲಾಧಿಕಾರಿಗೆ 2020 ಮತ್ತು 2021ರಲ್ಲಿ ಒಟ್ಟು 5 ಅರೆ ಸರಕಾರಿ ಪತ್ರಗಳನ್ನು ಬರೆದಿತ್ತು.
ಪತ್ರ ಬರೆದು 2 ವರ್ಷವಾದರೂ ಮಂಡ್ಯ ಜಿಲ್ಲಾಧಿಕಾರಿ ಈ ಸಂಬAಧ ಯಾವುದೇ ವರದಿಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು 2021 ಡಿಸೆಂಬರ್‌ನಲ್ಲಿ 6ನೇ ಅರೆ ಸರಕಾರಿ ಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಬರೆದಿದ್ದರು.
ಕಾಮೇಗೌಡ ಅವರು ಕೈಗೊಂಡಿರುವ ಪರಿಸರ ಪೂರಕ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಅವರ ಮತ್ತು ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ, ಮತ್ತಿತರ ವಿವರಗಳನ್ನೊಳಗೊಂಡ ವರದಿಯನ್ನು ಸರಕಾರಕ್ಕೆ ಕಳಿಸಿಕೊಡಬೇಕು ಎಂದು 2020ರ ಆಗಸ್ಟ್ 3, ಸೆ.21, ನವೆಂಬರ್ 21, 2021ರ ಜನವರಿ 5 ಮತ್ತು ಮಾರ್ಚ್ 20ರಂದು ಅರೆ ಸರಕಾರಿ ಪತ್ರಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು ಕೋರಿದ್ದರು.
ಆದರೆ 2021ರ ಡಿಸೆಂಬರ್ ಅಂತ್ಯದವರೆಗೂ ಮಂಡ್ಯ ಜಿಲ್ಲಾಧಿಕಾರಿ ಅವರು ಸರಕಾರಕ್ಕೆ ವರದಿಯನ್ನೇ ಸಲ್ಲಿಸಿರಲಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಪತ್ರ ಬರೆದಿದ್ದರು.
‘ಪ್ರಧಾನಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಲ್ಪಟ್ಟ ವ್ಯಕ್ತಿಯ ಬಗ್ಗೆ ಸರಕಾರದ ಹಂತದಲ್ಲಿ ಮುಂದಿನ ಪರಿಶೀಲನೆಯ ಸಲುವಾಗಿ ಅವಶ್ಯವಿರುವ ವರದಿಯನ್ನು ನೀಡಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಸ್ಪಂದಿಸದಿರುವುದು ವಿಷಾದಕರ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ಅಲ್ಲದೆ ‘ಈಗಲಾದರೂ ಸರಕಾರದಿಂದ ಕೋರಿರುವ ವರದಿಯನ್ನು ಒಂದು ವಾರದೊಳಗೆ ನೀಡಲು ನಿಮ್ಮ ವೈಯಕ್ತಿಕ ಗಮನವನ್ನು ಹರಿಸುವಂತೆ ತಿಳಿಯಲಿಚ್ಛಿ ಸುತ್ತೇನೆ. ಇಲ್ಲವಾದಲ್ಲಿ ವರದಿಯು ಸ್ವೀಕೃತವಾಗದ ಮಾಹಿತಿಯನ್ನು ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ,’ 
ಎಂದು ಪತ್ರದಲ್ಲಿ ಎಚ್ಚರಿಸಿದ್ದರು.

Writer - -ಜಿ.ಮಹಾಂತೇಶ್

contributor

Editor - -ಜಿ.ಮಹಾಂತೇಶ್

contributor

Similar News