ಧಾರ್ಮಿಕ ಸಂಘಟನೆಗೆ ಹಣಕಾಸಿನ ನೆರವು ಆರೋಪ: ಅಮೆಝಾನ್ ಇಂಡಿಯಾದ ಮುಖ್ಯಸ್ಥನಿಗೆ ನೋಟಿಸ್
ಹೊಸದಿಲ್ಲಿ, 20: ಧಾರ್ಮಿಕ ಸಂಘಟನೆ ‘ಆಲ್ ಇಂಡಿಯಾ ಮಿಷನ್’ಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ಅಮೆಝಾನ್ನ ಭಾರತದ ಮುಖ್ಯಸ್ಥನಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ಸಮನ್ಸ್ ನೀಡಿದೆ.
ನವೆಂಬರ್ 1ರಂದು ವಿಚಾರಣೆಗೆ ತನ್ನ ಮುಂದೆ ಹಾಜರಾಗಲು ವಿಫಲವಾದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಮೆಝಾನ್ನ ಜಾಗತಿಕ ಹಿರಿಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಅವರಿಗೆ ಆಯೋಗ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಮಕ್ಕಳನ್ನು ಅಕ್ರಮವಾಗಿ ಮತಾಂತರ ಮಾಡುವ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಆಲ್ ಇಂಡಿಯಾ ಮಿಷನ್ ತೊಡಗಿಕೊಂಡಿದೆ ಎಂದು ಆರೋಪಿಸಿ ಸರಕಾರೇತರ ಸಂಸ್ಥೆ ಸೋಷಿಯಲ್ ಜಸ್ಟಿಸ್ ಫಾರಂ ಸಲ್ಲಿಸಿದ ದೂರನ್ನು ಸ್ವೀಕರಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಆಲ್ ಇಂಡಿಯ ಮಿಷನ್ ಹಾಗೂ ಇತರ ಅನಾಥಾಶ್ರಮಗಳಿಗೆ ನೀಡಿದ ಹಣಕಾಸಿ ನೆರವಿನ ಬಗ್ಗೆ ವಿವರಗಳನ್ನು ನೀಡುವಂತೆ ಅಮೆಝಾನ್ ಇಂಡಿಯಾಕ್ಕೆ ಆಯೋಗ ಪತ್ರ ರವಾನಿಸಿದೆ. ಅಲ್ಲದೆ, ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯನ್ನು 7 ದಿನಗಳ ಒಳಗೆ ಸಲ್ಲಿಸುವಂತೆ ಕೂಡ ಸೂಚಿಸಿದೆ.
ಆದರೆ, ಅಮೆಝಾನ್ ಇಂಡಿಯಾ ಈ ನೋಟಿಸಿಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.