ಕಾಂತಾರ ಚಿತ್ರದ ʼವರಾಹ ರೂಪಂʼ ಹಾಡನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ
ಕೋಝಿಕ್ಕೋಡ್: ಕೇರಳ ಮೂಲದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ತೈಕುಡಂ ಬ್ರಿಡ್ಜ್ನಿಂದ ಕೃತಿಚೌರ್ಯದ ದೂರನ್ನು ಸ್ವೀಕರಿಸಿದ ನಂತರ ಕೋಝಿಕೋಡ್ ಸೆಷನ್ಸ್ ನ್ಯಾಯಾಲಯವು ಕಾಂತಾರ ಸಿನಿಮಾ ನಿರ್ಮಾಪಕರಿಗೆ ಚಿತ್ರಮಂದಿರಗಳು ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ “ವರಾಹ ರೂಪಂ” ಹಾಡನ್ನು ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿದೆ.
ಈ ಬ್ಯಾಂಡ್ 2015 ರಲ್ಲಿ ಬಿಡುಗಡೆಯಾದ ತಮ್ಮ "ನವರಸಂ" ಹಾಡನ್ನು ಕೃತಿಚೌರ್ಯ ಮಾಡಿದ ಆರೋಪದ ಮೇಲೆ ಕಾಂತಾರ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ತಾಣದಲ್ಲಿ ಘೋಷಿಸಿದ್ದರು.
ನ್ಯಾಯಾಲಯದ ತಡೆಯಾಜ್ಞೆಯ ಸುದ್ದಿಯನ್ನು ತೈಕುಡಂ ಬ್ರಿಡ್ಜ್ ತನ್ನ ಇನ್ಸ್ಟಾಗ್ರಾಂ ನಲ್ಲಿ ಮಾಹಿತಿ ನೀಡಿದೆ. ಪೋಸ್ಟ್ನಲ್ಲಿ, “ಕೋಝಿಕ್ಕೋಡ್ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕಾಂತಾರ ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕರಿಗೆ ಅಮೆಝಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರ ಪ್ಲಾಟ್ ಫಾರ್ಮ್ ಗಳಲ್ಲಿ ಅನುಮತಿಯಿಲ್ಲದೆ ವರಾಹ ರೂಪಂ ಹಾಡನ್ನು ನುಡಿಸದಂತೆ ತಡೆಯಾಜ್ಞೆ ನೀಡಿದ್ದಾರೆ" ಎಂದು ಮಾಹಿತಿ ನೀಡಿದೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ತೈಕುಡಂ ಬ್ರಿಡ್ಜ್, “ತೈಕ್ಕುಡಂ ಬ್ರಿಡ್ಜ್ ಯಾವುದೇ ರೀತಿಯಲ್ಲಿ ಕಾಂತಾರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಆಡಿಯೋ ವಿಷಯದಲ್ಲಿ ನಮ್ಮ 'ನವರಸಂ' ಮತ್ತು 'ವರಾಹ ರೂಪಂ' ನಡುವಿನ ಅನಿವಾರ್ಯ ಹೋಲಿಕೆಗಳಿದ್ದು, ಇದು ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿತ್ತು.