14ನೇ ಇನ್ಫೋಸಿಸ್ ಪ್ರಶಸ್ತಿಗಳ ಘೋಷಣೆ

ಬೆಂಗಳೂರಿನ ಪ್ರೊ. ಮಹೇಶ್ ಕಾಕಡೆ ಮತ್ತು ಪ್ರೊ. ಸುಧೀರ್ ಕೃಷ್ಣಸ್ವಾಮಿ ಸೇರಿದಂತೆ ಆರು ಗಣ್ಯರಿಗೆ ಪ್ರಶಸ್ತಿ

Update: 2022-11-15 17:51 GMT

ಬೆಂಗಳೂರು, ನ.15: ಎಂಜಿನಿಯರಿಂಗ್ ಮತ್ತು ಗಣಕ ವಿಜ್ಞಾನ, ಮಾನವಿಕ, ಜೀವವಿಜ್ಞಾನ, ಗಣಿತವಿಜ್ಞಾನ, ಭೌತ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಆರು ವಿಭಾಗಗಳಲ್ಲಿ ‘ಇನ್ಫೋಸಿಸ್ ಪ್ರಶಸ್ತಿ 2022’ಕ್ಕೆ ಆಯ್ಕೆಯಾಗಿರುವ ಹೆಸರುಗಳನ್ನು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್ಎಫ್) ಮಂಗಳವಾರ ಪ್ರಕಟಿಸಿದೆ. ಈ ಆರು ವಿಭಾಗಗಳು. ಭಾರತದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಾನವು ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರಶಸ್ತಿಯು ಚಿನ್ನದ ಪದಕ, ಸ್ಮರಣಿಕೆ ಹಾಗೂ 1 ಲಕ್ಷ ಡಾಲರ್ (ಅಥವಾ ಅದಕ್ಕೆ ಸರಿಸಮನಾದ ಭಾರತದ ರೂಪಾಯಿ) ನಗದನ್ನು ಒಳಗೊಂಡಿರುತ್ತದೆ. 

                  
ಪ್ರಶಸ್ತಿ ವಿಜೇತರು


ಸುಮನ್ ಚಕ್ರವರ್ತಿ: ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ವಿಜೇತರಾಗಿರುವ ಚಕ್ರವರ್ತಿ ಖರಗ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿದ್ದಾರೆ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದಾರೆ. ಅವರು ದ್ರವ ವಿಜ್ಞಾನ ಹಾಗೂ ಎೆಕ್ಟ್ರೊಮೆಕ್ಯಾನಿಕ್ಸ್ ಕ್ಷೇತ್ರಗಳಲ್ಲಿ ತನ್ನ ಸಂಶೋಧನೆಗಳ ಮೂಲಕ ಆರೋಗ್ಯಸೇವೆಗಳು ಸೀಮಿತ ಸಂಪನ್ಮೂಲ ಇರುವ ಸಂದರ್ಭಗಳಲ್ಲಿಯೂ ಲಭ್ಯವಾಗುವಲ್ಲಿ ನೆರವಾಗಿದ್ದಾರೆ. ರೋಗ ಪತ್ತೆಗೆ ಕಡಿಮೆ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಆವಿಷ್ಕರಿಸುವ ಕೆಲಸ ಮಾಡಿದ್ದಾರೆ.

  ಸುಧೀರ್ ಕೃಷ್ಣಸ್ವಾಮಿ:ಮಾನವಿಕ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಕೃಷ್ಣಸ್ವಾಮಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಆಗಿದ್ದಾರೆ. ಭಾರತದ ಸಂವಿಧಾನದ ಬಗ್ಗೆ ಅವರು ಹೊಂದಿರುವ ಒಳನೋಟ, ಸುಪ್ರೀಂ ಕೋರ್ಟ್ 1973ರಲ್ಲಿ ರೂಪಿಸಿದ್ದ ‘ಸಂವಿಧಾನದ ಮೂಲ ಸ್ವರೂಪ’ದ ತಾತ್ವಿಕತೆ ಬಗ್ಗೆ ಅವರ ಬರವಣಿಗೆಗಳಿಗಾಗಿ ಪ್ರಶಸ್ತಿ ನೀಡಲಾಗಿದೆ


 ವಿದಿತಾ ವೈದ್ಯ:ಜೀವ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿಯು ವಿದಿತಾ ವೈದ್ಯ ಅವರಿಗೆ ಒಲಿದಿದೆ. ಅವರು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ನ್ಯೂರೊಬಯಾಲಜಿ ಪ್ರೊಫೆಸರ್ ಆಗಿದ್ದಾರೆ. ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುವ ಮೆದುಳಿನ ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗಿದೆ.  

ಮಹೇಶ್ ಕಾಕಡೆ:ಗಣಿತ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಕಾಕಡೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತದ ಪ್ರೊಫೆಸರ್ ಆಗಿದ್ದಾರೆ. ಬೀಜಗಣಿತ ಸಂಖ್ಯಾಸೂತ್ರಕ್ಕೆ ಅವರು ನೀಡಿದ ಗಮನಾರ್ಹ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇದು ಗೂಢಲಿಪಿಶಾಸ್ತ್ರದಲ್ಲಿ ಬಳಕೆ ಆಗುತ್ತದೆ.

  ಪ್ರೊ.ನಿಸ್ಸೀಮ ಕಾಣೇಕರ್: ಭೌತ ವಿಜ್ಞಾನದಲ್ಲಿ ಇನ್ಫೊಸಿಸ್ ಪ್ರಶಸ್ತಿ ಪುಣೆಯ ನ್ಯಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರಾನಮಿಯ ಪ್ರೊ. ನಿಸ್ಸೀಮ ಕಾಣೇಕರ್ ಅವರಿಗೆ ಸಂದಿದೆ. ನಕ್ಷತ್ರಗಳು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸೃಷ್ಟಿಯಾದ ಕಾಲಘಟ್ಟದ ಗ್ಯಾಲಕ್ಸಿಗಳ ಕುರಿತ ಅವರ ಅಧ್ಯಯನಕ್ಕಾಗಿ ಈ ಗೌರವ ಸಂದಿದೆ. 

ರೋಹಿಣಿ ಪಾಂಡೆ:ಯೇಲ್ ವಿಶ್ವವಿದ್ಯಾಲಯದ ಆರ್ಥಿಕ ಬೆಳವಣಿಗೆ ಕೇಂದ್ರದ ನಿರ್ದೇಶಕಿ ಹಾೂ ಅಲ್ಲಿನ ಎರಡನೆಯ ಹೆನ್ರಿ ಜೆ. ಹ್ಯಾಂಜ್ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ರೋಹಿಣಿ ಪಾಂಡೆ ಅವರಿಗೆ ಸಮಾಜ ವಿಜ್ಞಾನ ವಿಭಾಗದ ಪ್ರಶಸ್ತಿ ಸಂದಿದೆ. ಆಡಳಿತ ಮತ್ತು ಉತ್ತರದಾಯಿತ್ವ, ಮಹಿಳೆಯರ ಸಬಲೀಕರಣ, ಬಡವರ ಬದುಕಿನಲ್ಲಿ ಸಾಲದ ಮಹತ್ವ, ಪರಿಸರದಂತಹ ಮಹತ್ವದ ವಿಷಯಗಳ ಕುರಿತು ಅವರು ನಡೆಸಿದ ಗಮನಾರ್ಹ ಸಂಶೋಧನೆಗಳನು್ನ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. 

ಕಾರ್ಯಕ್ರಮವು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ನ ಬೆಂಗಳೂರಿನ ಹೊಸ ಕಚೇರಿಯಲ್ಲಿ ನಡೆಯಿತು.

Similar News