ಅಂಗಾಂಗ ಕತ್ತರಿಸಿ ಒಂಬತ್ತರ ಬಾಲಕಿಯ ಅಮಾನುಷ ಹತ್ಯೆ: ಪ್ರಕರಣ ದಾಖಲು

Update: 2022-12-04 02:13 GMT

ಪಿಲಿಭಿಟ್: ಒಂಬತ್ತು ವರ್ಷದ ಬಾಲಕಿಗೆ ಚಿತ್ರಹಿಂಸೆ ನೀಡಿ, ಆಕೆಯ ಅಂಗಾಂಗಗಳನ್ನು ಅಮಾನುಷವಾಗಿ ಕತ್ತರಿಸಿ, ಗೋಧಿ ಹೊಲದಲ್ಲಿ ಎಸೆದು ಹೋದ ಪೈಶಾಚಿಕ ಘಟನೆ ನಗರದ ಹೊರವಲಯದ ಮಾಧೋಪುರ್ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೂರನೇ ತರಗತಿ ವಿದ್ಯಾರ್ಥಿನಿಯ ಹೊಟ್ಟೆಯನ್ನು ಸೀಳಿ ಹತ್ಯೆ ಮಾಡಲಾಗಿದ್ದು, ಒಳಾಂಗಗಳು ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಬಿದ್ದ ದೃಶ್ಯ ನಾಗರಿಕರನ್ನು ಬೆಚ್ಚಿ ಬೀಳಿಸಿದೆ ಎಂದು timesofindia.com ವರದಿ ಮಾಡಿದೆ.

ಬಾಲಕಿಯ ತಂದೆ ಅನೀಸ್ ಅಹ್ಮದ್ ಪ್ರಕಾರ, ಪುಟ್ಟ ಬಾಲಕಿ ಅನಮ್ ತನ್ನ ಮಾವ ಶಾದಬ್ ಅಹ್ಮದ್ ಜತೆ ಶುಕ್ರವಾರ ರಾತ್ರಿ ಪಕ್ಕದ ಸರೈಂದಪಟ್ಟಿ ಗ್ರಾಮದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದು, ನಂತರ ನಿಗೂಢವಾಗಿ ರಾತ್ರಿ ನಾಪತ್ತೆಯಾಗಿದ್ದಳು. ಕುಟುಂಬದವರು ಆಕೆಗಾಗಿ ಹುಡುಕಾಟ ನಡೆಸಿ ಮುಂಜಾನೆ 6ರ ಸುಮಾರಿಗೆ ಪತ್ತೆ ಮಾಡಿದರು.

"ಆಕೆ ಉಸಿರಾಡುತ್ತಿದ್ದ ಕಾರಣ ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆಕೆ ದಾಳಿಕೋರನ ಹೆಸರು ಬಹಿರಂಗಪಡಿಸಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ತೀವ್ರ ಗಾಯಗಳಾಗಿದ್ದ ಆಕೆ ಮೃತಪಟ್ಟಳು" ಎಂದು ಅನೀಸ್ ಅಹ್ಮದ್ ಪೊಲೀಸರಿಗೆ ತಿಳಿಸಿದರು. ಎಸ್ಪಿ ದಿನೇಶ್ ಕುಮಾರ್ ಪ್ರಭು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದರು.

ಪೊಲೀಸರು ಸ್ಥಳೀಯನಾದ ಶಕೀಲ್ ವೈಸ್ತವ ಎಂಬಾತನ ವಿರುದ್ಧ ಎಫ್‍ಐಆರ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಪ್ರಕಾರ ಅನೀಸ್ ಅಹ್ಮದ್ ಹಾಗೂ ಶಕೀಲ್‍ಗೆ ಹಳೆ ವೈರತ್ವ ಇತ್ತು. ಈ ಸಂಬಂಧ ಎಫ್‍ಐಆರ್ ಕೂಡಾ ದಾಖಲಿಸಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.

"ಹತ್ಯೆ ಮಾಡಿದ ಸ್ಥಳದಿಂದ 500 ಮೀಟರ್ ದೂರದ‌ ಹೊಲದಲ್ಲಿ ರಕ್ತಸಿಕ್ತ ಚಾಕು ಪತ್ತೆಯಾಗಿದೆ. ಎಲ್ಲ ಅಗತ್ಯ ಪುರಾವೆಗಳನ್ನು ವಿಧಿವಿಜ್ಞಾನ ತಜ್ಞರು ಸಂಗ್ರಹಿಸಿದ್ದಾರೆ" ಎಂದು ಪ್ರಭು ವಿವರಿಸಿದರು. ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ಅಟಾಪ್ಸಿ ವರದಿ ಹೇಳಿದೆ. ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Similar News