ಕೇವಲ ಮಿಸ್ಡ್‌ಕಾಲ್ ನೀಡಿ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಎಗರಿಸಿದ ಸೈಬರ್ ವಂಚಕರು

‘ಬ್ಯಾಂಕ್ ನಿಂದ ಯಾವುದೇ OTP ಬಂದಿಲ್ಲ’

Update: 2022-12-12 17:41 GMT

ಹೊಸದಿಲ್ಲಿ, ಡಿ. 12: ಆಘಾತಕಾರಿ ಘಟನೆಯೊಂದರಲ್ಲಿ, ಸೈಬರ್ ವಂಚಕರು ದಕ್ಷಿಣ ದಿಲ್ಲಿಯ ಭದ್ರತಾ ಸೇವೆಗಳ ಕಂಪೆನಿಯೊಂದರ ನಿರ್ದೇಶಕರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂಪಾಯಿ ಮೊತ್ತವನ್ನು ಎಗರಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಆಘಾತಕಾರಿ ಸಂಗತಿಯೆಂದರೆ, ವಂಚಕರು ಅವರ ಮೊಬೈಲ್ ಫೋನ್‌ಗೆ ಕೇವಲ ಮಿಸ್ಡ್ ಕಾಲ್‌ಗಳನ್ನು ನೀಡಿ ಹಣವನ್ನು ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಬ್ಯಾಂಕ್‌ನಿಂದ ಯಾವುದೇ ಒಟಿಪಿ ಬಂದಿಲ್ಲ.

ಸಂತ್ರಸ್ತ ವ್ಯಕ್ತಿಗೆ ಕೆಲವು ದಿನಗಳ ಹಿಂದೆ ಸಂಜೆ 7 ಗಂಟೆಯಿಂದ ರಾತ್ರಿ 8:45ರ ನಡುವಿನ ಅವಧಿಯಲ್ಲಿ ಮಿಸ್ಡ್‌ಕಾಲ್‌ಗಳು ಬಂದವು. ಕೆಲವು ಕರೆಗಳನ್ನು ಅವರು ಸ್ವೀಕರಿಸಿದರು ಹಾಗೂ ಕೆಲವು ಕರೆಗಳನ್ನು ನಿರ್ಲಕ್ಷಿಸಿದರು. ಯಾಕೆಂದರೆ, ಕರೆ ಮಾಡಿದ ವ್ಯಕ್ತಿಯು ಮಾತನಾಡುತ್ತಿರಲಿಲ್ಲ. ಬಳಿಕ ಅವರು ತನ್ನ ಫೋನ್ ಪರಿಶೀಲಿಸಿದಾಗ ಸುಮಾರು 50 ಲಕ್ಷ ರೂಪಾಯಿ ಮೊತ್ತವು ಆರ್‌ಟಿಜಿಎಸ್ ಮೂಲಕ ವರ್ಗಾವಣೆಯಾಗಿರುವುದನ್ನು ನೋಡಿ ಹೌಹಾರಿದರು.

ಆರಂಭಿಕ ಪರಿಶೀಲನೆಯ ವೇಳೆ, 12 ಲಕ್ಷ ರೂಪಾಯಿ ಭಾಸ್ಕರ್ ಮಂಡಲ್ ಎಂಬಾತನ ಖಾತೆಗೆ, 4.6 ಲಕ್ಷ ರೂಪಾಯಿ ಅವಿಜಿತ್ ಗಿರಿ ಎಂಬಾತನ ಖಾತೆಗೆ ಹೋಗಿರುವುದು ತಿಳಿದು ಬಂತು. ತಲಾ ಸುಮಾರು 10 ಲಕ್ಷ ರೂಪಾಯಿ ಎರಡು ಖಾತೆಗಳಿಗೆ ಹೋಗಿದೆ. ಸಣ್ಣ  ಮೊತ್ತಗಳ ಇತರ ಹಲವಾರು ವ್ಯವಹಾರಗಳೂ ನಡೆದಿವೆ.
ಈ ವಂಚನೆಯ ಸೂತ್ರಧಾರಿಗಳು ಝಾರ್ಖಂಡ್ ರಾಜ್ಯದ ಜಮ್ತಾರ ಎಂಬ ಪಟ್ಟಣದವರಾಗಿರಬಹುದು ಎನ್ನುವುದನ್ನು ತನಿಖೆ ಸೂಚಿಸಿದೆ. ಹಣ ಸ್ವೀಕರಿಸಿದವರು ತಮ್ಮ ಖಾತೆಗಳನ್ನು ಕಮಿಶನ್ ಆಧಾರದಲ್ಲಿ ವಂಚಕರಿಗೆ ಬಾಡಿಗೆಗೆ ಕೊಟ್ಟಿರಬಹುದು ಎಂಬುದಾಗಿ ಭಾವಿಸಲಾಗಿದೆ.
ಇದು ಭಾರತದಲ್ಲಿ ವ್ಯಕ್ತಿಯೊಬ್ಬನ ಖಾತೆಯಿಂದ ಸೈಬರ್ ಕ್ರಿಮಿನಲ್‌ಗಳು ಎಗರಿಸಿದ ಗರಿಷ್ಠ ಮೊತ್ತದ ಪ್ರಕರಣವಾಗಿದೆ.

ಕರೆಂಟ್ ಅಕೌಂಟ್ ಮುಳುವಾಯಿತು

ಸಾಮಾನ್ಯವಾಗಿ, ಹಣ ವರ್ಗಾವಣೆಗೆ ಬ್ಯಾಂಕ್‌ಗಳಲ್ಲಿ ನಿರ್ಬಂಧಗಳಿರುವುದರಿಂದ, ಸೈಬರ್ ವಂಚಕರು ಸಾವಿರಗಳ ಲೆಕ್ಕದಲ್ಲಿ ಸಣ್ಣ ಮೊತ್ತವನ್ನು ಅಪಹರಿಸುವುದಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿಯು ಚಾಲ್ತಿ (ಕರೆಂಟ್) ಖಾತೆಯಲ್ಲಿ ಹಣವನ್ನು ಇಟ್ಟಿದ್ದರು. ಹಾಗಾಗಿ, ಬೃಹತ್ ಮೊತ್ತದ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸಲು ವಂಚಕರಿಗೆ ಸಾಧ್ಯವಾಗಿದೆ.

ವಂಚಕರು ‘ಸಿಮ್ ಸ್ವ್ಯಾಪ್’ ವಿಧಾನ ಬಳಸಿದರೇ?

ಈ ಪ್ರಕರಣದಲ್ಲಿ, ಹೆಚ್ಚಿನ ಆಘಾತಕಾರಿ ಸಂಗತಿಯೆಂದರೆ, ಸಂತ್ರಸ್ತ ವ್ಯಕ್ತಿಯು ವಂಚಕರಿಗೆ ತನ್ನ ಯಾವುದೇ ಮಾಹಿತಿಯನ್ನು ಹೊರಗೆಡವಿಲ್ಲ. ಕೇವಲ ಫೋನ್ ಕರೆಗಳನ್ನು ಮಾಡಿ ಹಣ ಎಗರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸೈಬರ್ ಕಳ್ಳರು ‘ಸಿಮ್ ಸ್ವ್ಯಾಪ್’ (ಸಿಮ್ ಬದಲಾವಣೆ) ತಂತ್ರವನ್ನು ಬಳಸಿ ವಂಚನೆ ನಡೆಸಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಯ ಫೋನ್ ಸಿಮ್‌ಕಾರ್ಡ್‌ನ ಇನ್ನೊಂದು ಪ್ರತಿಯನ್ನು ಪಡೆದುಕೊಂಡು ವಂಚನೆ ನಡೆಸುವ ವಿಧಾನ ಇದಾಗಿರಬಹುದು ಎಂದು ಪೊಲೀಸರು ಹೇಳುತ್ತಾರೆ. ಈ ವಿಧಾನದಲ್ಲಿ, ಎರಡು ಹಂತಗಳ ಪರಿಶೀಲನೆಯಲ್ಲಿರುವ ಲೋಪಗಳನ್ನು ಕ್ರಿಮಿನಲ್‌ಗಳು ಬಳಸಿಕೊಳ್ಳುತ್ತಾರೆ. ಇಲ್ಲಿ ಎರಡನೇ ಹಂತದ ಪರಿಶೀಲನೆಯು ಮೊಬೈಲ್ ಫೋನ್‌ಗೆ ಬರುವ ಸಂದೇಶ ಅಥವಾ ಕರೆಯಾಗಿದೆ.

‘‘ಈ ವಂಚನಾ ವಿಧಾನದಲ್ಲಿ, ವಂಚಕರು ಸಂತ್ರಸ್ತರ ಮೊಬೈಲ್ ಸೇವೆ ಪೂರೈಕೆದಾರ ಕಂಪೆನಿಯನ್ನು ಸಂಪರ್ಕಿಸಿ ಸಂತ್ರಸ್ತನ ಮೊಬೈಲ್ ಸಂಖ್ಯೆಯನ್ನೇ ಹೊಂದಿರುವ ಬೇರೆ ಸಿಮ್ ಕಾರ್ಡ್‌ಗೆ ಚಾಲನೆ ನಿಡುವಂತೆ ಕೋರುತ್ತಾರೆ. ಹಾಗೂ ವಂಚನಾ ವಿಧಾನಗಳ ಮೂಲಕ ಈ ಪ್ರಕ್ರಿಯೆಯ ಶರತ್ತುಗಳನ್ನು ಪೂರೈಸುತ್ತಾರೆ. ಇದಾದ ಬಳಿಕ ಅವರು ಸಂತ್ರಸ್ತನ ಫೋನ್‌ನ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. ‘‘ಫೋನ್ ಅಪಹರಣ ಸೇರಿದಂತೆ ಇತರ ಕೋನಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Similar News