"ಅದಾನಿ, ಅಂಬಾನಿ ನಾಯಕರನ್ನು, ಮಾಧ್ಯಮವನ್ನು ಖರೀದಿಸಿದರು, ರಾಹುಲ್‌ ನನ್ನು ಖರೀದಿಸಲು ಸಾಧ್ಯವಾಗಲಿಲ್ಲ: ಪ್ರಿಯಾಂಕಾ

Update: 2023-01-03 18:19 GMT

ಘಾಝಿಯಾಬಾದ್,ಜ.3: ಕೈಗಾರಿಕೋದ್ಯಮಿಗಳಾದ ಗೌತಮ ಅದಾನಿ ಮತ್ತು ಮುಕೇಶ ಅಂಬಾನಿ ಅವರು ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ಖರೀದಿಸಿದ್ದಾರೆ,ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಖರೀದಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಇಲ್ಲಿ ಹೇಳಿದರು.

ದಿಲ್ಲಿಯಲ್ಲಿ ಒಂಭತ್ತು ದಿನಗಳ ವಿರಾಮದ ಬಳಿಕ ಮಂಗಳವಾರ ಪುನರಾರಂಭಗೊಂಡ ರಾಹುಲ್ ನೇತೃತ್ವದ ಭಾರತ ಜೋಡೊ ಯಾತ್ರೆಯು ಉತ್ತರ ಪ್ರದೇಶದ ಘಾಜಿಯಾಬಾದ್ ಪ್ರವೇಶಿಸಿದೆ. ಈ ಸಂದರ್ಭ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ,ರಾಹುಲ್ ಪ್ರತಿಷ್ಠೆಯನ್ನು ಹಾಳುಗೆಡವಲು ಸರಕಾರವು ಸಾವಿರಾರು ಕೋ.ರೂ.ಗಳನ್ನು ವ್ಯಯಿಸಿದೆ,ಆದರೆ ತನ್ನ ಸೋದರ ಸತ್ಯದ ಹಾದಿಯಿಂದ ಹಿಂದೆ ಸರಿದಿಲ್ಲ. ಅವರನ್ನು ಗುರಿಯಾಗಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿತ್ತು,ಆದರೆ ಅದರಿಂದ ಅವರು ಭೀತಿಗೊಳ್ಳಲಿಲ್ಲ. ಅವರೋರ್ವ ಯೋಧರಾಗಿದ್ದಾರೆ ಎಂದು ಹೇಳಿದರು.
‘ರಾಹುಲ್ ಸುರಕ್ಷತೆಯ ಬಗ್ಗೆ ಹೆದರಿಕೆಯಿದೆಯೇ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ರಾಹುಲ್ ಸತ್ಯದ ರಕ್ಷಾಕವಚವನ್ನು ಧರಿಸಿದ್ದಾರೆ ಎಂದು ನಾನು ಅವರಿಗೆ ಉತ್ತರಿಸಿದ್ದೇನೆ. ದೇವರು ನನ್ನ ಸೋದರನನ್ನು ಸುರಕ್ಷಿತವಾಗಿಡುತ್ತಾನೆ. ನೀವೆಲ್ಲ ಸತ್ಯವನ್ನು ಗುರುತಿಸುವವರೆಗೂ ದೇವರು ಈ ದೇಶದ ಸತ್ಯವನ್ನು ರಕ್ಷಿಸುತ್ತಾನೆ ’ ಎಂದ ಪ್ರಿಯಾಂಕಾ ಏಕತೆಯ ಮಾರ್ಗದಲ್ಲಿ ಮಾತ್ರ ತಮ್ಮ ಅಭಿವೃದ್ಧಿ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳುವಂತೆ ಜನರನ್ನು ಆಗ್ರಹಿಸಿದರು.

ಮಂಗಳವಾರ ಮಾಜಿ ‘ರಾ’ ಕಾರ್ಯದರ್ಶಿ ಎ.ಎಸ್.ದುಲತ್ ಮತ್ತು ಶಿವಸೇನೆ (ಉದ್ಧವ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಭಾರತ ಜೋಡೊ ಯಾತ್ರೆಯಲ್ಲಿ ಹೆಜ್ಜೆಗಳನ್ನು ಹಾಕಿದರು.ಈ ನಡುವೆ ಸುದ್ದಿಗೋಷ್ಠಿಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ವಿರಚಿತ ‘ಡಿಸ್ಕವರಿ ಆಫ್ ಇಂಡಿಯಾ’ವನ್ನು ಪ್ರಸ್ತಾಪಿಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿಯವರು,ಗಾಂಧಿ ಕುಟುಂಬವು ನಾಲ್ಕು ತಲೆಮಾರುಗಳಿಂದಲೂ ಭಾರತದ ಅನ್ವೇಷಣೆಯಲ್ಲಿ ತೊಡಗಿದೆ ಎಂದು ವ್ಯಂಗ್ಯವಾಡಿದರು. ‘ರಾಹುಲ್ಜಿ,ಭಾರತೀಯ ಸಂಸ್ಕೃತಿಯನ್ನು ಅದನ್ನು ಅರ್ಥೈಸಿಕೊಳ್ಳುವ ಮೂಲಕ ತಿಳಿದುಕೊಳ್ಳಬಹುದೇ ಹೊರತು ಭಾರತದಲ್ಲಿ ಪ್ರವಾಸ ಮಾಡುವ ಮೂಲಕ ಅಲ್ಲ ’ಎಂದು ಅವರು ಹೇಳಿದರು.

Similar News