ಕುನಾಲ್ ಕಾಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಚಂದ್ರಚೂಡ್
ಹೊಸದಿಲ್ಲಿ: ಸ್ಟ್ಯಾಂಡ್-ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಅವರು ಸುಪ್ರೀಂ ಕೋರ್ಟ್ ಕುರಿತು ಟ್ವೀಟ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಗುರುವಾರ ಹಿಂದೆ ಸರಿದಿದ್ದಾರೆ ಎಂದು indiatoday ವರದಿ ಮಾಡಿದೆ.
ಒಂದು ಸಣ್ಣ ವಿಚಾರಣೆಯ ಸಮಯದಲ್ಲಿ, ಸಿಜೆಐ ಅವರು ಈ ಪ್ರಕರಣವನ್ನು ಆಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಾನು ಹೊರಡಿಸಿದ್ದ ಆದೇಶದ ಮೇಲೆ ಕಾಮೆಂಟ್ ಮಾಡಲಾಗಿತ್ತು, ಆದ್ದರಿಂದ ತಾನು ಈ ವಿಚಾರಣೆಯ ಭಾಗವಾಗಲು ಬಯಸುವುದಿಲ್ಲ ಎಂದು ಚಂದ್ರಚೂಡ್ ಹೇಳಿದ್ದಾರೆ.
"ನಾನು ಹೊರಡಿಸಿದ ಆದೇಶದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದುದರಿಂದ ನಾನು ಇದನ್ನು ಬೇರೆ ಪೀಠದ ಮುಂದೆ ಇಡುತ್ತೇನೆ. ಎರಡು ವಾರಗಳ ನಂತರ ಪಟ್ಟಿ ಮಾಡಿ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಜಾಮೀನು ಮಂಜೂರು ಮಾಡಿದ ಆದೇಶದ ನಂತರ ಕಾಮ್ರಾ ಸುಪ್ರೀಂ ಕೋರ್ಟ್ ವಿರುದ್ಧ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದರು. ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಡಿಸೆಂಬರ್ 18, 2020 ರಂದು, ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಅವರು ಮಾಡಿದ ಟ್ವೀಟ್ಗಳಿಗಾಗಿ ಸುಪ್ರೀಂ ಕೋರ್ಟ್ ಕಾಮ್ರಾ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತು ಮತ್ತು ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿತು.