ಹೊಸದಿಲ್ಲಿ: ರಸ್ತೆ ಅಪಘಾತದಲ್ಲಿ ಯುವತಿ ಸಾವು ಪ್ರಕರಣ; ಮತ್ತಿಬ್ಬರು ಆರೋಪಿಗಳಿಗಾಗಿ ದಿಲ್ಲಿ ಪೊಲೀಸರ ಶೋಧ

Update: 2023-01-05 17:39 GMT

ಹೊಸದಿಲ್ಲಿ, ಜ. 5: ಕಾರು ಸ್ಕೂಟರ್ ಗೆ ಢಿಕ್ಕಿಯಾಗಿ ಅದರಲ್ಲಿದ್ದ 20 ವರ್ಷದ ಯುವತಿಯನ್ನು ಎಳೆದೊಯ್ದು ಸಾವಿಗೆ ಕಾರಣವಾದ ಕಾಂಜಾವಾಲಾ ಪ್ರಕರಣದಲ್ಲಿ ಅಶುತೋಷ್ ಹಾಗೂ ಅಂಕುಂಶ್ ಎಂಬ ಇನ್ನಿಬ್ಬರು ಭಾಗಿಯಾಗಿದ್ದಾರೆ ಎಂದು ದಿಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪ್ರಕರಣದ ಇತರ ಐವರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಲಾದ ಈ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು 18 ತಂಡಗಳು ನಡೆಸುತ್ತಿವೆ ಹಾಗೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘‘ಸಿಸಿಟಿವಿ ಕೆಮರಾದ ದೃಶ್ಯಾವಳಿ ಹಾಗೂ ಫೋನ್ ಕರೆ ದಾಖಲೆಯ ವಿವರದ ಆಧಾರದಲ್ಲಿ ಈ ಇಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ’’ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಹಾಗೂ ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಅವರು ಹೇಳಿದ್ದಾರೆ. ‘‘ಎಲ್ಲಾ ಐದು ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳು ಹಾಗೂ ಮೃತಪಟ್ಟ ಯುವತಿಯ ನಡುವೆ ಯಾವುದೇ ನಂಟು ಇಲ್ಲ ಎಂಬುದು ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ’’ ಎಂದು ಅವರು ತಿಳಿಸಿದ್ದಾರೆ.

Similar News