ಮಗಳನ್ನು ಕೊಂದು, ಶವವನ್ನು ರೈಲಿನಿಂದ ಹೊರಕ್ಕೆ ಎಸೆದ ತಾಯಿ!
ಜೈಪುರ: ಮೂರು ವರ್ಷದ ಮಗಳನ್ನು ಕೊಂದು ಶವವನ್ನು ರೈಲಿನಿಂದ ಹೊರಕ್ಕೆ ಎಸೆದ ಆರೋಪದಲ್ಲಿ ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.
ಈ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಿಂದ ವರದಿಯಾಗಿದೆ. ಆರೋಪಿಗಳನ್ನು ಸಿನಿತಾ ಮತ್ತು ಸುನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ.
ಕಳೆದ ಸೋಮವಾರ ತಡರಾತ್ರಿ ತನ್ನ ಪ್ರಿಯಕರನ ಸಹಾಯದಿಂದ ಆರೋಪಿ ಮಹಿಳೆ ತನ್ನ ಮೂರು ವರ್ಷದ ಪುತ್ರಿ ಕಿರಣ್ ಎಂಬಾಕೆಯನ್ನು ಉಸಿರುಗಟ್ಟಿಸಿ ಸಾಯಿಸಿ, ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಕೊಂಡು ಶ್ರೀಗಂಗಾನಗರ ರಳು ನಿಲ್ದಾಣಕ್ಕೆ ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ.
ಮುಂಜಾನೆ 6.10ಕ್ಕೆ ರೈಲು ಏರಿದ ಈ ಜೋಡಿ, ಫತೂಹಿ ರೈಲು ನಿಲ್ದಾಣದ ಬಳಿಯ ಕಾಲುವೆಯ ಸೇತುವೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಶವವನ್ನು ಎಸೆದರು ಎಂದು ಎಸ್ಪಿ ಆನಂದ್ ಶರ್ಮಾ ವಿವರಿಸಿದ್ದಾರೆ. ಕಾಲುವೆಗೆ ಮೃತದೇಹವನ್ನು ಎಸೆಯಲು ಅವರು ಬಯಸಿದ್ದರು. ಆದರೆ ಅದು ಟ್ರ್ಯಾಕ್ ಸಮೀಪ ಬಿತ್ತು. ಮಂಗಳವಾರ ಬೆಳಿಗ್ಗೆ ಶವವನ್ನು ಪತ್ತೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಶಾಸ್ತ್ರಿನಗರದ ನಿವಾಸಿಯಾಗಿರುವ ಸುನೀತಾಗೆ ಐವರು ಮಕ್ಕಳಿದ್ದು, ಇಬ್ಬರು ಮಕ್ಕಳ ಜತೆಗೆ ಸುನ್ನಿ ಜತೆ ವಾಸವಿದ್ದಳು. ಇತರ ಮೂವರು ಮಕ್ಕಳು ಸುನೀತಾಳ ಪತಿಯ ಜತೆಗೆ ಇದ್ದರು. ಬಾಲಕಿಯ ಗುರುತು ಪತ್ತೆಯಾದ ಬಳಿಕ ಸುನೀತಾಳನ್ನು ಪತ್ತೆ ಮಾಡಿ ವಿಚಾರಣೆಗೆ ಕರೆಸಲಾಯಿತು. ವಿಚಾರಣೆ ವೇಳೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.