ಭಟ್ಕಳ ಕ್ಷೇತ್ರ: ತಂಝೀಮ್ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ 'ಮುಸ್ಲಿಮ್ ಅಭ್ಯರ್ಥಿ' ನಿರ್ಣಯಕ್ಕೆ ಸೋಲು

ಪ್ರಬಲ ಆಕಾಂಕ್ಷಿ ಜೆ.ಡಿ.ಎಸ್ ನ ಇನಾಯತುಲ್ಲಾ ಶಾಬಂದ್ರಿಗೆ ಹಿನ್ನಡೆ

Update: 2023-03-21 16:35 GMT

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರಲು ಸೋಮವಾರ ಸಂಜೆ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ನಡೆದ ಕ್ಷೇತ್ರದ ಸರ್ವಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದರಿಂದ ಪ್ರಬಲ ಆಕಾಂಕ್ಷಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಗೆ ಈ ನಿರ್ಣಯದಿಂದ ಹಿನ್ನೆಡೆಯಾಗಿದೆ. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಈ ಬಾರಿ ಚುನಾವಣ ಕಣಕ್ಕೆ ಇಳಿಸುವ ಕುರಿತು ಸಾಮಾಜಿಕ ಜಾಲಾತಾಣಗಳಲ್ಲಿ ನಡೆದ ಬಿಸಿಬಿಸಿ ಚರ್ಚೆ ನಡೆದಿತ್ತು. ಸುಮಾರು 60 ಸಾವಿರ ಮತದಾರರು ಇರುವ ಮುಸ್ಲಿಮರು ಈ ಬಾರಿ ಮುಸ್ಲಿಂ ಅಭ್ಯರ್ಥಿಯನ್ನೇ ಬೆಂಬಲಿಸಬೇಕು ಎಂಬ ಆಗ್ರಹ ಬಲವಾಗಿ ಕೇಳಿ ಬಂದಿತ್ತು. ಈ ಬಗ್ಗೆ  ಭಟ್ಕಳದ ಮುಸ್ಲಿಮರ ರಾಜಕೀಯ, ಸಾಮಾಜಿಕ ಸಂಘಟನೆಯಾಗಿರುವ ತಂಝೀಮ್ ಸಂಸ್ಥೆ  ಕ್ಷೇತ್ರದ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯನ್ನು ತಂಝೀಮ್ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಆಯೋಜಿಸಿತ್ತು. ಇದರಲ್ಲಿ ಭಟ್ಕಳ, ಶಿರಾಲಿ, ಮಂಕಿ, ಮುರುಡೇಶ್ವರ, ಉಪ್ಪಾಣ, ಸಂಶಿ, ಹೊನ್ನಾವರ ಸೇರಿದಂತೆ ಪ್ರಮುಖ ಜಮಾಅತ್ ಗಳ 48 ಪ್ರತಿನಿಧಿಗಳು ಭಾಗವಹಿಸಿದ್ದರು.

ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಬೇಕೋ ಬೇಡವೋ ಎಂಬ ಒಂದಂಶದ ಈ ಸಭೆಯಲ್ಲಿ ಪರವಿರೋಧದ ಚರ್ಚೆಯಾಗಿ ಕೊನೆಯಲ್ಲಿ ಮತದಾನ ನಡೆದು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಣಯಕ್ಕೆ ಸೋಲಾಗಿದೆ. ಭಟ್ಕಳ ವ್ಯಾಪ್ತಿಯ ಬಹುತೇಕ ಸದಸ್ಯರು ಮುಸ್ಲಿಂ ಅಭ್ಯರ್ಥಿ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೆ ಭಟ್ಕಳದ ಸುತ್ತಮುತ್ತಲ ಪ್ರದೇಶಗಳ ಜಮಾಅತ್ ಗಳ ಸದಸ್ಯರಲ್ಲಿ ಹೆಚ್ಚಿನವರು ಇದನ್ನು ವಿರೋಧಿಸಿದ್ದರಿಂದ ಕೊನೆಗೆ ನಿರ್ಣಯಕ್ಕೆ ಸೋಲಾಗಿದೆ ಎಂದು ತಿಳಿದು ಬಂದಿದೆ. ಸರ್ವ ಜಮಾಅತ್ ಸದಸ್ಯರ ಸಭೆಗೆ ಮೊದಲು ತಂಝೀಮ್ ನ ರಾಜಕೀಯ ವ್ಯವಹಾರಗಳ ಸಮಿತಿ ಹಾಗು ಕಾರ್ಯಕಾರಿ ಸಮಿತಿಯಲ್ಲಿ ಈ ವಿಷಯ ಚರ್ಚೆಯಾಗಿ ಮುಸ್ಲಿಂ ಅಭ್ಯರ್ಥಿ ಆಗ್ರಹಕ್ಕೆ ಒಮ್ಮತ ವ್ಯಕ್ತವಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಕೊನೆಗೆ ನಡೆದ ಸರ್ವ ಜಮಾಅತ್ ಸದಸ್ಯರ ಸಭೆಯಲ್ಲಿ ಮತಕ್ಕೆ ಹಾಕಿದಾಗ ನಿರ್ಣಯಕ್ಕೆ ಸೋಲಾಗಿದೆ.  

2013ರಲ್ಲಿ ತಂಝೀಮ್ ಬೆಂಬಲದೊಂದಿಗೆ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಇನಾಯತುಲ್ಲಾ ಶಾಬಂದ್ರಿ 27ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವುದರ ಮೂಲಕ ಪಕ್ಷೇತರ ಅಭ್ಯರ್ಥಿ ಮಾಂಕಾಳು ವೈದ್ಯರ ವಿರುದ್ಧ ಸೋಲನ್ನು ಕಂಡು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಈ ಮತಗಳೇ ಮುಂದೆ ಇಲ್ಲಿ ಮುಸ್ಲಿಮ್ ಅಭ್ಯರ್ಥಿ ವಾದ ಗರಿಗೆದರುವಂತೆ ಮಾಡಿತ್ತು. 2018ರಲ್ಲಿ ಮತ್ತೆ ಮುನ್ನೆಲೆಗೆ ಬಂದ ಇನಾಯತುಲ್ಲಾ ಶಾಬಂದ್ರಿಗೆ  ಆಗ ತಂಝೀಮ್ ಬೆಂಬಲಿಸಲು ಒಪ್ಪದ ಕಾರಣ ಜೆ.ಡಿ.ಎಸ್  ಟಿಕೇಟ್ ನಿರಾಕರಿಸಿತ್ತು. ಈ ಬಾರಿ ಭಾರೀ ಹುಮ್ಮಸ್ಸು ಮತ್ತು ಸಿದ್ಧತೆಯಲ್ಲಿದ್ದ ಇನಾಯತುಲ್ಲಾ ಶಾಬಂದ್ರಿಗೆ ತಂಝೀಮ್ ನಿರ್ಣಯ ಮತ್ತೆ ನಿರಾಶೆ ತಂದಿದೆ. ಹಾಲಿ ತಂಝೀಮ್ ಅಧ್ಯಕ್ಷರೂ ಆಗಿರುವ ಇನಾಯತುಲ್ಲಾ ಶಾಬಂದ್ರಿ ತಂಝೀಮ್ ನಿರ್ಣಯ ಒಪ್ಪಿಕೊಳ್ಳಬೇಕಾಗಿದೆ.

ಈ ಬಾರಿ ಇನಾಯತುಲ್ಲಾ ಸ್ಪರ್ಧಿಸಿದರೆ  ಗೆಲುವಿನ ಉತ್ತಮ ಅವಕಾಶವಿದೆ ಎಂದು ಮುಸ್ಲಿಂ ಅಭ್ಯರ್ಥಿಗಾಗಿ ಆಗ್ರಹಿಸುತ್ತಿರುವವರ ವಾದ. ಹಾಲಿ ಶಾಸಕ  ಬಿಜೆಪಿಯ ಸುನಿಲ್ ನಾಯ್ಕರಿಗೆ ಬಿಜೆಪಿಯಲ್ಲೇ ವಿರೋಧವಿದೆ.  ಕಾಂಗ್ರೆಸ್ ಎರಡು ಮೂರು ಬಣಗಳಾಗಿ ಒಡೆದು ಹೋಗಿದೆ. ಈ ಎಲ್ಲದರ ಲಾಭ  ಪಡೆದು, ತನ್ನ ಸಮುದಾಯದ ಮತಗಳೊಂದಿಗೆ  ಉಳಿದ ಸಮುದಾಯಗಳಿಂದಲೂ ಒಂದಷ್ಟು ಮತ ಸೆಳೆದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವನ್ನು ಅವರು ಮುಂದಿಡುತ್ತಿದ್ದಾರೆ. ಆದರೆ ತಂಝೀಮ್ ಸಭೆಯಲ್ಲಿ  ಮುಸ್ಲಿಮ್ ಅಭ್ಯರ್ಥಿ ನಿರ್ಣಯಕ್ಕೆ ಸೋಲಾಗಿರುವುದು ಈ ಬೇಡಿಕೆಗೆ ಭಾರೀ ಹಿನ್ನಡೆ ತಂದಿದೆ. 

ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ನಿರ್ಣಯವಾಗಿರುವುದರಿಂದ  ತಂಝೀಮ್ ಈ ಬಾರಿಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಲಿದೆ ಎಂದು ಕಾದು ನೋಡಬೇಕಾಗಿದೆ.

Similar News