ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರ ಸಹಚರನ ನಿವಾಸ ಸೇರಿ, 12 ಕಡೆ ಸಿಬಿಐ ತಪಾಸಣೆ

Update: 2023-05-17 10:46 GMT

ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಪ್ರಶ್ನೆಗೊಳಪಡಿಸಿದ ಹಲವು ದಿನಗಳ ನಂತರ ಅವರ ಆಗಿನ ಮಾಧ್ಯಮ ಸಲಹೆಗಾರರ ನಿವಾಸ ಸೇರಿದಂತೆ, ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನ ರಾಜ್ಯಗಳ 12 ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ ಎಂದು indianexpress.com ವರದಿ ಮಾಡಿದೆ.

ಸಿಬಿಐ ಅಧಿಕಾರಿಗಳ ಪ್ರಕಾರ, ದಿಲ್ಲಿಯ ಹತ್ತು ಕಡೆ ಹಾಗೂ ರಾಜಸ್ಥಾನದ ಎರಡು ಕಡೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಅನಿಲ್ ಅಂಬಾನಿ ಮಾಲಕತ್ವದ ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಕಂಪನಿ ಒಳಗೊಂಡಿರುವ ವಿಮಾ ಯೋಜನೆಯಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳ ಕುರಿತ ಪ್ರಕರಣ ಇದಾಗಿದೆ. ಈ ವಿಚಾರದಲ್ಲಿ ನನಗೆ ಲಂಚ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಆಪಾದಿಸಿದ ನಂತರ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಕಳೆದ ತಿಂಗಳು ಸತ್ಯಪಾಲ್ ಮಲಿಕ್ ಅವರನ್ನು ಅವರ ನಿವಾಸದಲ್ಲಿ ಸುಮಾರು ಐದು ಗಂಟೆಗಳ ಕಾಲ ಸಿಬಿಐ ವಿಚಾರಣೆಗೊಳಪಡಿಸಿತ್ತು. ಕಳೆದ ಏಳು ತಿಂಗಳ ಅವಧಿಯಲ್ಲಿ ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಸತ್ಯಪಾಲ್ ಮಲಿಕ್ ಅವರನ್ನು ಎರಡನೆಯ ಬಾರಿಗೆ ವಿಚಾರಣೆಗೊಳಪಡಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಸತ್ಯಪಾಲ್ ಮಲಿಕ್ ಆರೋಪಿಯೂ ಅಲ್ಲ, ಅವರ ಪಾತ್ರದ ಕುರಿತು ಈವರೆಗೆ ತನಿಖೆಯೂ ನಡೆದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿತ್ತು. ಸತ್ಯಪಾಲ್ ಮಲಿಕ್ ಅವರು ಬಿಹಾರ, ಜಮ್ಮು ಮತ್ತು ಕಾಶ್ಮೀರ, ಗೋವಾ ಹಾಗೂ ಮೇಘಾಲಯದಲ್ಲಿ ತಮ್ಮ ರಾಜ್ಯಪಾಲರ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ನಂತರ ಕಳೆದ ಅಕ್ಟೋಬರ್‌ನಲ್ಲಿ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿತ್ತು.

ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಸತ್ಯಪಾಲ್ ಮಲಿಕ್, "ಈ ಪ್ರಕರಣದಲ್ಲಿ ಸಿಬಿಐ ದೂರುದಾರರಿಗೇ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ. ಸುನಕ್ ಬಾಲಿ ಯಾವುದೇ ಸರ್ಕಾರಿ ವೇತನ ಪಡೆಯದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನನ್ನ ಮಾಧ್ಯಮ ಸಲಹೆಗಾರ/ಕಾರ್ಯದರ್ಶಿ ಆಗಿದ್ದರು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

Similar News