ಮಣಿಪುರ ಹಿಂಸಾಚಾರ ಕುರಿತು ಚರ್ಚೆ; ಜೂನ್ 24ರಂದು ಸರ್ವಪಕ್ಷ ಸಭೆ ಕರೆದ ಅಮಿತ್ ಶಾ

Update: 2023-06-22 03:56 GMT

ಹೊಸದಿಲ್ಲಿ: ಹಿಂಸಾಚಾರದಿಂದ ಕಂಗೆಟ್ಟಿರುವ ಮಣಿಪುರದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಶನಿವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ.

ಕಳೆದ ತಿಂಗಳು ಸಂಘರ್ಷಪೀಡಿತ ರಾಜ್ಯಕ್ಕೆ ಭೇಟಿ ನೀಡಿದ್ದ ಶಾ, ಈಗಾಗಲೇ 115 ಮಂದಿಯ ಜೀವ ಬಲಿ ಪಡೆದಿರುವ ಹಾಗೂ 40 ಸಾವಿರಕ್ಕೂ ಹೆಚ್ಚು ಮಂದಿಯನ್ನು ನಿರಾಶ್ರಿತರನ್ನಾಗಿ ಮಾಡಿರುವ ಹಿಂಸಾಚಾರ ಕೊನೆಗೊಳಿಸುವ ಪ್ರಯತ್ನವಾಗಿ ಮೀಟಿ ಹಾಗೂ ಕುಕಿ ಸಮುದಾಯಗಳ ಮುಖಂಡರ ಜತೆ ಹಲವು ಸುತ್ತುಗಳ ಮಾತುಕತೆ ನಡೆಸಿದ್ದರು.

"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 24ರಂದು ಮಧ್ಯಾಹ್ನ 3 ಗಂಟೆಗೆ ಹೊಸದಿಲ್ಲಿಯಲ್ಲಿ ಮಣಿಪುರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆದಿದ್ದಾರೆ" ಎಂದು ಗೃಹ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.

ಬಹುಸಂಖ್ಯಾತ ಮೀಟಿ ಜನಾಂಗಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಮೀಸಲಾತಿ ನೀತಿ ವಿರುದ್ಧ ಕುಕಿ ಸಮುದಾಯದವರು ಮೇ 3ರಂದು ಚುರಚಂದಾಪುರ ಪಟ್ಟಣದ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರ  ರಾಜ್ಯಾದ್ಯಂತ ಹರಡಿ ಸಾವಿರಾರು ಮಂದಿ ಬೆಂಕಿಗಾಹುತಿಯಾದ ತಮ್ಮ ಮನೆಗಳನ್ನು ತೊರೆದು ಕಾಡು ಸೇರಿಕೊಂಡಿದ್ದರು.

Similar News