ಪ್ರತಿಭಟನೆಯ ಡಂಗುರ ಬಾರಿಸಿದ ಕಲಬುರ್ಗಿ

ಸಂಪ್ರದಾಯ ಗಾಢವಾಗಿರುವ ಕಡೆ ಬೇರುಬಿಟ್ಟಿರುವ ನಂಬಿಕೆಗಳನ್ನು ಕೀಳುವುದು ಕಠಿಣ. ಪ್ರಜಾತಾಂತ್ರಿಕ ಪರಂಪರೆಯಿಲ್ಲದ ಹಿಂದುಳಿದ ಸಮಾಜಗಳಲ್ಲಿ ಇದು ಇನ್ನೂ ಕಷ್ಟ. ಅಪ್ರಿಯವಾದ ಸತ್ಯ ನುಡಿದು, ಅಪ್ರಿಯವಾದ ಪರಿಣಾಮಗಳನ್ನು ತಮ್ಮ ಜೀವನದ ಉದ್ದಕ್ಕೂ ಕಲಬುರ್ಗಿ ಎದುರಿಸಬೇಕಾಯಿತು. ಯಾವ ಬೆದರಿಕೆಗೂ, ಒತ್ತಡಕ್ಕೂ ಜಗ್ಗದೆ ನಮ್ಮ ಬದ್ಧತೆಯನ್ನು ನಿಭಾಯಿಸುವ ಅನಿವಾರ್ಯತೆಯನ್ನು ಅವರು ಸಾಧಿಸಿ ತೋರಿಸಿದರು.

Update: 2023-08-30 05:31 GMT

- ಎಂ.ಎ. ಅರುಣ್

ಅಸಾಧಾರಣ ಸಂಶೋಧಕ ಡಾ ಎಂ.ಎಂ. ಕಲಬುರ್ಗಿಯವರು ಹತ್ಯೆಯಾಗಿ ಈ ಆಗಸ್ಟ್ 30ಕ್ಕೆ ಎಂಟು ವರ್ಷ. ಅವರನ್ನು ಬಲಿ ತೆಗೆದುಕೊಂಡ ದ್ವೇಷ, ಅಸಹನೆ ಇನ್ನೂ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸಂವಿಧಾನ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಎಂದು ನೆಚ್ಚಿಕೊಂಡಿದ್ದವರೆಲ್ಲ ಬೆಚ್ಚಿಬೀಳುವಂತೆ ಮಾಡಿದೆ. ಕರ್ನಾಟಕದ ಚುನಾವಣೆಗೆ ಕೆಲವು ತಿಂಗಳ ಹಿಂದೆ ದಲಿತ ಲೇಖಕರೊಬ್ಬರು ‘‘ಇದು ಬಹಳ ಯಾತನಾಮಯವಾದ ಸಮಯ, ಆತಂಕದಿಂದ ರಾತ್ರಿ ನಿದ್ದೆಗೆಡುವಂತಾಗಿದೆ’’ ಎಂದಿದ್ದರು.

ಎರಡು ಪ್ರಾಣಿಗಳು ಮುಖಾಮುಖಿಯಾದಾಗ ಒಂದಕ್ಕೊಂದು ಸ್ವಾಭಾವಿಕವಾಗಿ ಹಲ್ಲುತೋರಿಸುವಂತಹ ಹುಟ್ಟುಗುಣವಲ್ಲ ಈ ದ್ವೇಷ. ನಮ್ಮ ದೇವಸ್ಥಾನಗಳಲ್ಲಿ ಕಾಣಿಸುವ ಸ್ವಯಂ ಉದ್ಭವ ಮೂರ್ತಿಗಳಂತೆ ತನಗೆ ತಾನೇ ಇದು ಹುಟ್ಟಿಕೊಂಡಿಲ್ಲ. ಇದನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿ, ರಾಜಕೀಯವಾಗಿ ಬಲ ತುಂಬಿ, ಎಲ್ಲರನ್ನು ನಂಬಿಸುವಂತಹ ಸಿದ್ಧಾಂತ ಲೇಪಿಸಿ, ಸಮಾಜವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಕೆಲವರು ಪ್ರಯಾಸ ಪಡುತ್ತಿದ್ದಾರೆ. ಒಂದು ವರ್ಗ ಇಡೀ ಸಮಾಜದ ಮೇಲೆ ಪ್ರಾಬಲ್ಯ ಸಾಧಿಸುವ ದುಶ್ಚಟ ಇತಿಹಾಸದ ಉದ್ದಕ್ಕೂ ಕಾಣಿಸುತ್ತದೆ. ಕೆಲವೊಮ್ಮೆ ಇದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ಬಂದು ಕೋಲಾಹಲವಾಗುತ್ತದೆ. 12ನೇ ಶತಮಾನದ ಕಲ್ಯಾಣದಲ್ಲಿ ಶ್ರಮಿಕ ವರ್ಗಗಳು ಹೊಸ ದಾರಿ ತುಳಿದು ಒಂದು ಸಂಚಲನ ಸೃಷ್ಟಿಸಿದವು. ಸ್ವತಂತ್ರ ಭಾರತದ ಸಂವಿಧಾನ ತಳಸಮುದಾಯಗಳನ್ನು ಕ್ರಮೇಣವಾಗಿ ಬಲಪಡಿಸಿ ಅವರನ್ನು ಹಿಡಿದಿಟ್ಟಿದ್ದ ಸರಪಳಿಗಳನ್ನು ಸಡಿಲಗೊಳಿಸಲು ಪ್ರಾರಂಭಿಸಿತು. ಕಲ್ಯಾಣ ಕ್ರಾಂತಿಯನ್ನು ಪಟ್ಟಭದ್ರರು ಸಫಲವಾಗಿ ಅರಗಿಸಿಕೊಂಡಂತೆ, ಈಗಲೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತಿರೋಧ ಅಪರೂಪದ ಘಟನೆ. ಒಂದು ವರ್ಗ ಪ್ರಬಲವಾಗಿ ಬೆಳೆಯುತ್ತಿದ್ದಂತೆ ಅದಕ್ಕೆ ಸಾಮಾನ್ಯವಾಗಿ ಸಿಗುವ ಪ್ರತಿಕ್ರಿಯೆಯೆಂದರೆ ವೌನ. ತಮಗೆ ಕೊಟ್ಟಿರುವ ಸ್ಥಾನವನ್ನು ಒಪ್ಪಿಕೊಂಡು ತಲೆ ಕೆಳಗೆ ಮಾಡಿಕೊಂಡು ನಡೆಯುವವರೇ ಹೆಚ್ಚು. ಕಲಬುರ್ಗಿಯವರು ಒಂದು ಸಂದರ್ಶನದಲ್ಲಿ ಹೇಳಿದಂತೆ ಇತಿಹಾಸದಲ್ಲಿ ಕಾಣುವ ವೌನ ಸಾಮರಸ್ಯದ ವೌನವಲ್ಲ. ಬಲಿಷ್ಠರು ಹೇರಿರುವ ವೌನ. ಈ ವೌನವನ್ನು ಭೇದಿಸುವುದು ಅವರ ಸಂಶೋಧನೆಯ ಮುಖ್ಯ ಕಾಳಜಿಯಾಯಿತು. ಆ ಕಾರ್ಯ ಎಷ್ಟು ಕಠಿಣ, ತಾನು ಎಂತಹ ಜೇನುಗೂಡಿಗೆ ಕೈಹಾಕುತ್ತಿದ್ದೇನೆ, ಅದರಿಂದ ಬರುವ ಗಂಡಾಂತರಗಳ ಬಗ್ಗೆ ಅವರಿಗೆ ಅರಿವು, ಅನುಭವ ಎರಡೂ ಇತ್ತು. ಆದರೆ ಕಲ್ಯಾಣದಲ್ಲಿ ಸಮ ಸಮಾಜ ಕಟ್ಟಲು ಹೋಗಿ ಹೊತ್ತಿಕೊಂಡು ಉರಿದಿದ್ದ ಶರಣ ಚಳವಳಿಯ ಚೈತನ್ಯದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ಅವರಿಗೆ ಬೇರೆ ಯಾವ ಮಾರ್ಗವೂ ಕಾಣಿಸಲಿಲ್ಲ ಎಂದು ಅನಿಸುತ್ತದೆ. ಭಾರತದ ಪರಂಪರೆಯಲ್ಲಿ ವೈಯಕ್ತಿಕ ಮೋಕ್ಷಕ್ಕೆ ದಾರಿ ತೋರುವ ಆಧ್ಯಾತ್ಮಿಕ, ಮಾನವಿಕ ಚಿಂತನೆಯೇ ಅಧಿಕ, ಸಾಮಾಜಿಕ ಕಳಕಳಿ ವಿರಳ. ಎಲ್ಲರೂ ‘‘ಸತ್ಯವನ್ನು ಮಾತನಾಡು, ಸದಾಚಾರವನ್ನು ಆಚರಿಸು’’ ಎನ್ನುತ್ತಾರೆ ಹೊರತು ‘‘ವಿಪ್ರನಿಂದ ಅಂತ್ಯಜನವರೆಗೆ ಎಲ್ಲರೂ ಒಂದೇ’’ ಎನ್ನುವುದಿಲ್ಲ. ಸಾಮಾನ್ಯ ಘೋಷಣೆಯ ಮೂಲಕ (ಮಾನವಿಕ) ಉಪದೇಶ ಮಾಡುವವರು ಮಹಾತ್ಮರಾಗುತ್ತಾರೆ. ನಿರ್ದಿಷ್ಟ ವಿಮರ್ಶೆರೂಪದ (ಸಾಮಾಜಿಕ) ಸಂದೇಶ ಸಾರುವವರು ಹುತಾತ್ಮರಾಗುತ್ತಾರೆ. ಈ ಮಾತುಗಳನ್ನು ಕಲಬುರ್ಗಿಯವರು 2011ರ ಭಾಷಣವೊಂದರಲ್ಲಿ ಹೇಳಿದ್ದರು. ಇಲ್ಲಿ ‘ಹುತಾತ್ಮ’ ಪದ ತಟ್ಟನೆ ಮನಸ್ಸಿಗೆ ಹೊಳೆಯುವ ಪ್ರಯೋಗವಲ್ಲ, ಮೇಲ್ನೋಟಕ್ಕೆ ಸ್ವಲ್ಪ ಉತ್ಪ್ರೇಕ್ಷೆಯೆನಿಸಬಹುದು. ಆದರೆ ಪ್ರತಿರೋಧಕ್ಕೆ ಧ್ವನಿಗೂಡಿಸುವವರಿಗೆ ಸಿಗುವ ಬಳುವಳಿಯನ್ನು ಕಲಬುರ್ಗಿಯವರು ಆಗಲೇ ಸಾಕಷ್ಟು ಅನುಭವಿಸಿದ್ದರು. ಈ ಪದ ಅವರ ಅರಿವಿಲ್ಲದೆ ಉಪಪ್ರಜ್ಞೆಯಿಂದ ಬಂದ ಹಾಗೆ ಭಾಸವಾಗುತ್ತದೆ. ಇತಿಹಾಸದಲ್ಲಿ ಹೆಪ್ಪುಗಟ್ಟಿದ್ದ ವೌನ ಮುರಿಯಲು ಮುಂದಾದವರಲ್ಲಿ ಕಲಬುರ್ಗಿಯವರು ಮೊದಲನೆಯವರೇನಲ್ಲ. ಆದರೆ ಅಪರೂಪವಾದ ಕೆಲವು ವಿಶೇಷ ಅಸ್ತ್ರಗಳು ಇವರ ಬತ್ತಳಿಕೆಯಲ್ಲಿದ್ದವು. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರು ಇತಿಹಾಸವನ್ನು ಶೋಧಿಸಲು ಶಿಲಾಶಾಸನಗಳನ್ನು ಓದಲು ಕಲಿತರು. ಯಾರಿಗೂ ಕಾಣದೆ ಕುಳಿತಿದ್ದ ಹಸ್ತಪ್ರತಿಗಳನ್ನು ಹೆಕ್ಕಿ, ಜನಪದವನ್ನೂ ಬಳಸಿಕೊಂಡು, ಸಾಹಿತ್ಯವನ್ನು, ಶಾಸನಗಳನ್ನು ಜಾಲಾಡಿ ತಮ್ಮ ಕಾಲದ ಅನಿವಾರ್ಯವಾದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರು. ಹಠ ಹಿಡಿದು ನಿದ್ದೆಗೆಟ್ಟು ಮಾಡಿದ ಅವರ ಸಂಶೋಧನೆಯಿಂದ ಕರ್ನಾಟಕದ ಸಾಮಾಜಿಕ ಇತಿಹಾಸದ ಚಿತ್ರಣವೇ ಬದಲಾಯಿತು. ಇದರ ಮುಖ್ಯ ಪ್ರಯೋಜನ ಪಡೆದುಕೊಂಡಿದ್ದು ಪ್ರತ್ಯೇಕ ಲಿಂಗಾಯತ ಧರ್ಮದ ಕೂಗೆಬ್ಬಿಸಿದ್ದ ಬಸವ ಅನುಯಾಯಿಗಳು. ಶತಮಾನದಷ್ಟು ಹಳೆಯ ಬೇಡಿಕೆಯಾದರೂ ಈ ಚಳವಳಿ ಅನೇಕ ಗೊಂದಲಗಳಲ್ಲಿ ಸಿಲುಕಿಕೊಂಡಿತ್ತು. ಲಿಂಗಾಯತರು ಪ್ರತ್ಯೇಕ ಧರ್ಮೀಯರಾದರೆ ಅವರಲ್ಲಿ ವ್ಯಾಪಕವಾಗಿ ವೈದಿಕ ಆಚರಣೆಗಳೇಕೆ ಕಾಣಿಸಿಕೊಳ್ಳುತ್ತವೆ? ಲಿಂಗಾಯತರು ಯಾರು? ವೀರಶೈವರು ಯಾರು? ಜಾತಿ, ವರ್ಣ ಹಿಡಿದುಕೊಂಡು, ಹೋಮ ಹವನ ಮಾಡಿಕೊಂಡು ವೈದಿಕತೆಯ ಅವತಾರ ಮೂರ್ತಿಗಳಂತಿರುವ ಪಂಚಾಚಾರ್ಯರು ಬಸವಣ್ಣನವರಿಗಿಂತ ಪ್ರಾಚೀನರೇ, ಶ್ರೇಷ್ಠರೇ?

ಇತ್ತೀಚಿನ ತನಕ ಮಾಧ್ಯಮಗಳಲ್ಲಿ ಲಿಂಗಾಯತದ ಬದಲು ಬರೀ ವೀರಶೈವ ಹೆಸರೇ ಕಾಣಿಸಿಕೊಳ್ಳುತ್ತಿತ್ತು. ಅನೇಕ ವಿದ್ವಾಂಸರು ಕಲ್ಯಾಣದ ಶರಣರು ವರ್ಣ, ಜಾತಿಗಳನ್ನು ತಿರಸ್ಕರಿಸಿದ್ದರೂ ಕಾಲಕ್ರಮೇಣ ಸಾಮಾಜಿಕ ಒತ್ತಡದಿಂದ ವೈದಿಕ ಪ್ರಭಾವಕ್ಕೆ ತೆರೆದುಕೊಂಡರು ಎಂದು ನಂಬಿದ್ದರು. ಈ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದ್ದ ಪ್ರತಿಯೊಂದು ಪ್ರಶ್ನೆಯನ್ನು ದಾಖಲೆಗಳನ್ನು ಮುಂದಿಟ್ಟುಕೊಂಡು ಉತ್ತರಿಸಿದ ಸಾಧನೆ ಕಲಬುರ್ಗಿಯವರದು. ಅವರು ತೋರಿಸಿದಂತೆ ಲಿಂಗಾಯತರು ತಾವಾಗಿಯೇ ಶರಣರ ಮೂಲ ತತ್ವಗಳಿಂದ ದೂರ ಸರಿಯಲಿಲ್ಲ. ಅವರ ತಲೆಯ ಮೇಲೆ ವೈದಿಕತೆಯನ್ನು ಹೇರುವ ವ್ಯವಸ್ಥಿತ ಯೋಜನೆಗೆ ಬಲಿಯಾದರು. 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಸಿಲುಕಿ ಅನೇಕ ಶೈವ ಪಂಥಗಳು ಶರಣ ಚಳವಳಿಯಲ್ಲಿ ಕರಗಿ ಹೋದವು. ಅವುಗಳಲ್ಲಿ ಮುಖ್ಯವಾದವರು ಆಂಧ್ರದಲ್ಲಿ ಬಲಿಷ್ಠವಾಗಿದ್ದ ಶೈವ ಬ್ರಾಹ್ಮಣ ಆರಾಧ್ಯರು. ಇವರು ಒಳ ಬಂದರೂ ತಮ್ಮ ವೈದಿಕತೆ ಸಿದ್ಧಾಂತ, ಆಚರಣೆಗಳನ್ನು ಬಿಡದೆ, ಇಷ್ಟಲಿಂಗಕ್ಕೆ ಜನಿವಾರ ಸೇರಿಸಿ ಒಂದು ಮಿಶ್ರ ಧರ್ಮವನ್ನು ಬೆಳೆಸಿದರು. ಅದನ್ನು ವೀರಶೈವ ಹೆಸರಿನಿಂದ ಪ್ರಚಾರ ಮಾಡಲು ಉಜ್ಜನಿ, ಕಾಶಿ, ಕೇದಾರ, ಬಾಳೆಹೊನ್ನೂರು, ಶ್ರೀಶೈಲಗಳಲ್ಲಿ ಪಂಚಾಚಾರ್ಯ ಮಠಗಳನ್ನೂ ಸ್ಥಾಪಿಸಿದರು. ಈ ಮಠಗಳಿಗೆ ಭಕ್ತವೃಂದ ಸೃಷ್ಟಿಸಲು ಕ್ಷೀಣವಾಗಿ ಉಸಿರುಬಿಡುತ್ತಿದ್ದ ಬಸವಪೂರ್ವ ಶೈವ ಮಠಗಳನ್ನು ಮತ್ತು ನಾಥ ಪಂಥದ ಶಾಖೆಗಳನ್ನು ವಶಪಡಿಸಿಕೊಂಡು ತಮ್ಮ ಪಂಚಾಚಾರ್ಯ ವ್ಯವಸ್ಥೆಯೊಳಗೆ ಸೇರಿಸಿಕೊಂಡರು. ಪಂಚಾಚಾರ್ಯರು 16ನೇ ಶತಮಾನದ ನಂತರ ಬಂದರೂ ಸಿದ್ಧಾಂತ ಶಿಖಾಮಣಿಯಂತಹ ಕೃತಕ ಗ್ರಂಥಗಳ ಮೂಲಕ ಇಲ್ಲದ ಪ್ರಾಚೀನತೆ ಸೃಷ್ಟಿಸಿಕೊಂಡು, ತಾವು ಬಸವಣ್ಣನವರ ಹಿರಿಯರು ಎಂದು ಬಿಂಬಿಸಿಕೊಂಡರು. 13ರಿಂದ 18ನೇ ಶತಮಾನಗಳವರೆಗೆ ಲಿಂಗಾಯತ ಸಮಾಜದಲ್ಲಾದ ಈ ಮಹತ್ತರ ಬದಲಾವಣೆಗಳನ್ನು ಕಲಬುರ್ಗಿಯವರು ಹಂತಹಂತವಾಗಿ ಶಾಸನ, ಸಾಹಿತ್ಯ ದಾಖಲೆಗಳ ಮೂಲಕ ತೋರಿಸಿದರು. ಪ್ರತ್ಯೇಕ ಧರ್ಮ ಸಾಧಿಸಲು ವೀರಶೈವದ, ಪಂಚಾಚಾರ್ಯರ ವೈದಿಕ ಪ್ರಭಾವದಿಂದ ದೂರವಾಗಿ ಶರಣ ಚಳುವಳಿಯ ಮೂಲ ತತ್ವಗಳಿಗೆ ಹಿಂದಿರುಗುವ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಇವತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿರುವುದು ಅವರು ಹಾಕಿದ ಗೆರೆಯ ಮೇಲೆಯೇ. ಸಂಶೋಧನೆ ವಿಶ್ವವಿದ್ಯಾನಿಲಯದ ಗೋಡೆಗಳನ್ನು ದಾಟಿಕೊಂಡು ಲಕ್ಷಾಂತರ ಜನರ ಧೋರಣೆಗಳನ್ನು ರೂಪಿಸುತ್ತಿರುವ ಅಪರೂಪದ ನಿದರ್ಶನ ಇದು. ವ್ಯಕ್ತಿಯನ್ನು ಕೊಂದಷ್ಟು ಅವನ ಚಿಂತನೆಯನ್ನು ಕೊಲ್ಲುವುದು ಸುಲಭವಲ್ಲ ಎನ್ನುವ ಮಾತು ಇಲ್ಲಿ ಜೀವಂತವಾಗಿದೆ. ಕಲಬುರ್ಗಿಯವರ ಹತ್ಯೆಯ ನಂತರ ಲಿಂಗಾಯತರಲ್ಲಿ ಬಸವ ಪ್ರಜ್ಞೆ ಮತ್ತಷ್ಟು ವೇಗವಾಗಿ ಜಾಗೃತಿಯಾಗುತ್ತಿರುವ ಹಾಗೆ ಕಾಣುತ್ತದೆ. ‘‘ಈಗೇನಾದರೂ ಅಂತಹ ಘಟನೆ (ಹತ್ಯೆ) ಮತ್ತೆ ನಡೆದರೆ ಲಿಂಗಾಯತರು ದಂಗೆಯೇಳುತ್ತಾರೆ’’ ಎನ್ನುತ್ತಾರೆ ಪ್ರತ್ಯೇಕ ಧರ್ಮದ ಹೋರಾಟಗಾರರೊಬ್ಬರು. ಶರಣ ಮಾರ್ಗದ ಮೇಲಿದ್ದ ಕಲಬುರ್ಗಿಯವರ ಕಾಳಜಿ ಮತ್ತವರ ಬರಹಗಳ ಪ್ರಮಾಣ ನೋಡಿ ಅವರನ್ನು ಅಪಾರ್ಥಮಾಡಿಕೊಳ್ಳುವುದು ಸುಲಭ. ಪ್ರಾಧ್ಯಾಪಕ ಮಿತ್ರರೊಬ್ಬರು ಕಲಬುರ್ಗಿಯವರು ಶರಣ ಸಮಾಜದಲ್ಲಿ ಹುಟ್ಟಿ ಶರಣ ಸಂಶೋಧಕರಾಗಿಯೇ ಬೆಳೆದರು ಎಂದಿದ್ದರು. ಕಲಬುರ್ಗಿಯವರ ಬಾಧ್ಯತೆಯಿದ್ದದ್ದು ಬಸವಣ್ಣನವರ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸಿದ್ಧಾಂತವನ್ನು ಸಮಾಜದಲ್ಲಿ ಮತ್ತೆ ನೆಲವೂರುವಂತೆ ಮಾಡುವುದೇ ಹೊರತು ಯಾವುದೇ ಜಾತಿಯ ಪರವಾಗಿ ನಿಲ್ಲುವುದಲ್ಲ. ಲಿಂಗಾಯತ ಧರ್ಮವನ್ನು ಎಲ್ಲಾ ಸಮುದಾಯಗಳು ಸೇರಿ ಸೃಷ್ಟಿಸಿರುವ ಧರ್ಮವೆಂದು ಗುರುತಿಸುತ್ತ, ಮೇಲುವರ್ಗವೆಂದು ಕರೆಸಿಕೊಂಡಿರುವ ಲಿಂಗಾಯತ ಪಂಗಡಗಳು ಕೆಳವರ್ಗದ ಪಂಗಡಗಳನ್ನು ‘ಅಪ್ಪಿಕೊಳ್ಳಬೇಕೆಂದು’ ಕರೆಕೊಡುವಂತಹ ಮಾನವಂತಿಕೆಯಿತ್ತು ಅವರಲ್ಲಿ. ಬಸವಣ್ಣನವರನ್ನು ಬಿಟ್ಟರೆ ಅವರಿಗಿದ್ದ ಇನ್ನೊಂದು ಪ್ರಧಾನ ಕಾಳಜಿಯೆಂದರೆ ಕನ್ನಡ. ಲಿಂಗಾಯತರಲ್ಲಿ ಶೂದ್ರ ಪ್ರಜ್ಞೆಯನ್ನು ಮೂಡಿಸಲು ಪ್ರಯತ್ನಿಸಿದಂತೆ ಕನ್ನಡಿಗರಲ್ಲಿ ದ್ರಾವಿಡ ಪ್ರಜ್ಞೆಯನ್ನು ಬರಿಸಲು ಪ್ರಯತ್ನಿಸಿದರು. ಕನ್ನಡಿಗರು ರಾಜಕೀಯವಾಗಿ ಬಲಿಷ್ಠರಾಗಿ ಅರ್ಧ ಭಾರತವನ್ನು ಆಳಿದರೂ ಅವರ ಭಾಷೆ ಸಂಸ್ಕೃತ, ತಮಿಳು, ತೆಲುಗುಗಳ ಆರ್ಭಟದಲ್ಲಿ ಸೊರಗಿದ್ದು ಅವರ ಸಂಶೋಧನೆಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಿಷಾದ. ಪ್ರಾಚೀನ ಕರ್ನಾಟಕಕ್ಕೆ ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, ಆಗಮಿಕ ಶೈವ ಧರ್ಮಗಳು ವಲಸೆ ಬಂದವು. ಇವುಗಳ ನಡುವೆ ಸ್ಥಳೀಯ ಪ್ರಾಬಲ್ಯಕ್ಕಾಗಿ ದೊಡ್ಡ ಹೋರಾಟ ನಡೆದು ಅದರಲ್ಲಿ ಕೊನೆಗೆ ಸಫಲವಾಗಿದ್ದು ವೈದಿಕ ಧರ್ಮ. ಅದರ ಭಾಷೆ ಸಂಸ್ಕೃತ ದೇವ ಭಾಷೆಯಾಯಿತು, ಜನರ ಭಾಷೆ ಕನ್ನಡ ಅಸ್ಪಶ್ಯವಾಯಿತು. ಕನ್ನಡದಲ್ಲಿ ಕೃತಿಗಳು ಬಂದರೂ ಅವುಗಳಲ್ಲಿ ಉತ್ತರ ಭಾರತದಿಂದ ಎರವಲು ಬಂದ ವಿಷಯಗಳೇ ತುಂಬಿದ್ದವು.

ಕನ್ನಡ ಪ್ರಜ್ಞೆ ಅರಳಲು ಮುಕ್ತ ಅವಕಾಶವಾಗಿದ್ದು ವಚನಯುಗದಲ್ಲಿ. ಸಂಸ್ಕೃತ ಭಾಷೆ, ಉತ್ತರ ಭಾರತದ ಪುರಾಣಗಳನ್ನು ತಿರಸ್ಕರಿಸಿದ ವಚನಕಾರರಿಗೆ ಕನ್ನಡ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಹಾಗೂ ಪ್ರತಿಭಟನೆಯ ಮಾಧ್ಯಮವಾಯಿತು. ಆದರೆ ಇತಿಹಾಸದ ಉದ್ದಕ್ಕೂ ನಮ್ಮ ರಾಜರು ಹೊರಗಿನ ಭಾಷೆಗಳಿಗೆ ಮಣೆ ಹಾಕಿದ್ದರಿಂದ ತನ್ನ ಮನೆಯಲ್ಲಿಯೇ ಕನ್ನಡ ಮಲ ಮಗನಂತಾಗಿ, ತಮ್ಮ ನೆಲದಲ್ಲೇ ಕನ್ನಡಿಗರು ಎರಡನೇ ದರ್ಜೆ ಪ್ರಜೆಗಳಾದರು. ಪರಕೀಯ ಭಾಷೆ, ಸಂಸ್ಕೃತಿ, ಸಿದ್ಧಾಂತಗಳು ಕನ್ನಡಿಗರ ಮೇಲೆ ಆಳವಾದ ಪರಿಣಾಮಬೀರಿ, ಅವರ ಹೊರಗಿನ ಅಸ್ತಿತ್ವ ಮತ್ತು ಒಳಗಿನ ಅಸ್ಮಿತೆಗಳೆರಡೂ ಕ್ಷೀಣಿಸಿ, ಸ್ವಾಭಿಮಾನಕ್ಕಿಂತ ಸಹನೆ ಬೆಳೆಸಿಕೊಳ್ಳುವುದು ಅನಿವಾರ್ಯವಾಯಿತು ಎನ್ನುವುದು ಕಲಬುರ್ಗಿಯವರ ವಾದ.

ಸಂಪ್ರದಾಯ ಗಾಢವಾಗಿರುವ ಕಡೆ ಬೇರುಬಿಟ್ಟಿರುವ ನಂಬಿಕೆಗಳನ್ನು ಕೀಳುವುದು ಕಠಿಣ. ಪ್ರಜಾತಾಂತ್ರಿಕ ಪರಂಪರೆಯಿಲ್ಲದ ಹಿಂದುಳಿದ ಸಮಾಜಗಳಲ್ಲಿ ಇದು ಇನ್ನೂ ಕಷ್ಟ. ಅಪ್ರಿಯವಾದ ಸತ್ಯ ನುಡಿದು, ಅಪ್ರಿಯವಾದ ಪರಿಣಾಮಗಳನ್ನು ತಮ್ಮ ಜೀವನದ ಉದ್ದಕ್ಕೂ ಕಲಬುರ್ಗಿ ಎದುರಿಸಬೇಕಾಯಿತು. ಯಾವ ಬೆದರಿಕೆಗೂ, ಒತ್ತಡಕ್ಕೂ ಜಗ್ಗದೆ ನಮ್ಮ ಬದ್ಧತೆಯನ್ನು ನಿಭಾಯಿಸುವ ಅನಿವಾರ್ಯತೆಯನ್ನು ಅವರು ಸಾಧಿಸಿ ತೋರಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತ ಇರುವ ಕಲಬುರ್ಗಿಯವರ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು: ‘‘ನನ್ನ ಕಣ್ಣ ಮುಂದ ಎರಡು ಪ್ರಶ್ನೆಗಳಾದವ. ಕೆಟ್ಟ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ವರ್ತಮಾನದಾಗ ಬದುಕಬೇಕೋ? ಕೆಟ್ಟ ವ್ಯವಸ್ಥೆಯನ್ನು ಪ್ರತಿಭಟಿಸಿ ಭವಿಷ್ಯತ್ತಿನಾಗ ಬದುಕಬೇಕೋ? ಇಲ್ಲಿ ಬದುಕಿದವರು, ಅಲ್ಲಿ ಸಾಯತಾರ, ಅಲ್ಲಿ ಬದುಕಬೇಕಾದವರು ಇಲ್ಲಿ ಸಾಯಬೇಕಾಗ್ತದ.’’

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News