ಕುಂದಾಪುರ | ಉದ್ಯಮಿ ಸುರೇಂದ್ರ ಶೆಟ್ಟಿ ಕೊಲೆ ಯತ್ನ: ಓರ್ವ ಆರೋಪಿ ಬಂಧನ

Update: 2024-07-09 10:44 GMT

ಸತೀಶ ಶೆಟ್ಟಿ

ಕುಂದಾಪುರ, ಜು.8: ಕೋಟೇಶ್ವರದ ಸಹನಾ ಸಮೂಹ ಸಂಸ್ಥೆಗಳ ಮಾಲಕ ಸುರೇಂದ್ರ ಶೆಟ್ಟಿ ಮೇಲಿನ ಕೊಲೆಯತ್ನ ಪ್ರಕರಣಕ್ಕೆ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಎಸ್.ಎಸ್.ಎಸ್. ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲಕ ಸತೀಶ ಶೆಟ್ಟಿ(53) ಬಂಧಿತ ಆರೋಪಿ. ಈತನ ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಹನಾ ಸುರೇಂದ್ರ ಶೆಟ್ಟಿಯವರ ಪತ್ನಿ ಕುಂದಾಪುರ ನಗರದ ಎ.ಎಸ್. ಟ್ರೇಡರ್ ಎಂಬ ಕಟ್ಟಡದಲ್ಲಿ ಮಳೆ ನೀರು ಸೋರಿಕೆ ಸಂಬಂಧ ಕೆಲಸ ಮಾಡುತ್ತಿದ್ದು ಈ ಬಗ್ಗೆ ಒಂದನೇ ಮಹಡಿಯಲ್ಲಿರುವ ಸತೀಶ ಶೆಟ್ಟಿ ಎಂಬಾತ ಅಸಮಧಾನ ಹೊಂದಿದ್ದನು. ಇದೇ ವಿಚಾರವಾಗಿ ಆತ ಸುರೇಂದ್ರ ಶೆಟ್ಟಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದನು ಎಂದು ದೂರಲಾಗಿದೆ.

ಜು.7ರಂದು ಬೆಳಗ್ಗೆ ಕುಂದಾಪುರದ ಕೆಎಸ್ಸಾರ್ಟಿಸಿ ಡಿಪ್ಪೋ ಎದುರಿನ ಸರ್ವಿಸ್ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ತಮ್ಮ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಈ ವೇಳೆ ಕಾರಿನ ಗ್ಲಾಸ್ ಹಾಗೂ ಬಾಗಿಲು ತೆಗೆಯದ್ದರಿಂದ ಕಾರಿನ ಡೋರ್ ಜಖಂ ಮಾಡಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ.

ಈ ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News