ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ ಸಹಾಯಧನ: ಕೃಷಿ ಇಲಾಖೆ ಆದೇಶ

Update: 2025-04-03 18:41 IST
ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ ಸಹಾಯಧನ: ಕೃಷಿ ಇಲಾಖೆ ಆದೇಶ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ಸೂಕ್ಷ್ಮ ನೀರಾವರಿ ಪರಿಕರಗಳನ್ನು ಪಡೆಯಲು ಇದ್ದ ನಿರ್ಬಂಧವನ್ನು ಸರಕಾರ ಸಡಿಲಿಸಿದ್ದು ಎಲ್ಲಾ ವರ್ಗದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಮರು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳನ್ನು ಹೊರತುಪಡಿಸಿ ಇತರೆ ವರ್ಗದವರಿಗೆ ಒಮ್ಮೆ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಇದ್ದ ಅವಕಾಶವನ್ನು ಇತರೆ ವರ್ಗಗಳಿಗೂ ವಿಸ್ತರಿಸಿ ಕೃಷಿ ಇಲಾಖೆ ಆದೇಶ ಹೊರಡಿಸಿದೆ.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ವಿಶೇಷ ಪ್ರಯತ್ನದ ಫಲವಾಗಿ ಈ ಆದೇಶ ಹೊರಬಿದ್ದಿದ್ದು, ಲಕ್ಷಾಂತರ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಕೃಷಿ ಸಚಿವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ರೈತರು ಇತರೆ ವರ್ಗಗಳಿಗೆ ಇರುವ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿ ನಿಯಮ ಸಡಿಲಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸರಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಇದ್ದ 9 ಘಟಕಗಳನ್ನು ಸೇರ್ಪಡೆಗೊಳಿಸಿ ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಎಂದು ಮರು ನಾಮಕರಣಗೊಳಿಸಿ ಅನುಷ್ಠಾನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ವ್ಯಾಪ್ತಿಗೆ ಒಳಪಡುವಂತೆ ರೈತರಿಗೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

2024-25ನೇ ಸಾಲಿನಲ್ಲಿ ಪಿಎಂಕೆಎಸ್‍ಐ ಮತ್ತು ಪಿಎಂಎಂಎಸ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆಗೆ 274 ಕೋಟಿ ರೂ. ಮೀಸಲಿರಿಸಲಾಗಿತ್ತು. ಇದರಿಂದ 2.60 ಲಕ್ಷ ರೈತರಿಗೆ ಇದರ ಅನುಕೂಲ ತಲುಪಲಿದೆ. ಹಾಗೆಯೇ ಟಾಪ್‍ಅಪ್ ಯೋಜನೆಯಡಿ 252 ಕೋಟಿ ರೂ.ಗಳ ಅನುದಾನವನ್ನು ಸೂಕ್ಷ್ಮ ನೀರಾವರಿ ಸಾಧನ ಸಲಕರಣೆಗಳ ಆರ್ಥಿಕ ನೆರವಿಗಾಗಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News