ಬೆಂಗಳೂರು | ಮದ್ಯದ ಅಮಲಿನಲ್ಲಿ ಅಪಘಾತ : ಬೈಕ್ ಸವಾರ ಮೃತ್ಯು

Update: 2024-05-19 17:09 GMT

ಬೆಂಗಳೂರು: ಕಾರು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯನಗರ ಮುಖ್ಯ ರಸ್ತೆಯಲ್ಲಿ ವರದಿಯಾಗಿದೆ.

ಸುಬ್ರಮಣ್ಯ ನಗರ ನಿವಾಸಿ ವಿನಯ್ (32) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದ್ದು, ಕಾರು ಚಲಾಯಿಸುತ್ತಿದ್ದ ಹರಿನಾಥ್ ಎಂಬಾತನನ್ನು ವಶಕ್ಕೆ ಪಡೆದಿರುವುದಾಗಿ ಮಲ್ಲೇಶ್ವರಂ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಮದ್ಯ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದ ಹರಿನಾಥ್, ಮೊದಲು ರಸ್ತೆ ಬದಿ ನಿಂತಿದ್ದ ಆಟೋಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ನಂತರ ಕಾರು ವಿನಯ್ ಹಾಗೂ ಆತನ ಸ್ನೇಹಿತ ತೆರಳುತ್ತಿದ್ದ ಬೈಕಿಗೆ ಢಿಕ್ಕಿಯಾಗಿದೆ. ಆ ರಭಸಕ್ಕೆ ನೆಲಕ್ಕೆ ಬಿದ್ದ ವಿನಯ್‍ನನ್ನು ಸ್ವಲ್ಪದೂರ ಎಳೆದೊಯ್ದಿದೆ.

ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿನಯ್ ಹಾಗೂ ಆತನ ಸ್ನೇಹಿತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನಯ್ ಮೃತಪಟ್ಟಿದ್ದಾನೆ. ಆತನ ಜೊತೆಗಿದ್ದ ಮತ್ತೊಬ್ಬ ಸವಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಅಪಘಾತವೆಸಗಿದ ಬಳಿಕ ಸ್ಥಳೀಯರು ಬಂದು ಕಾರಿನಿಂದ ಇಳಿಯಲು ಸೂಚಿಸಿದರೂ ಸಹ ಚಾಲಕ ಹರಿನಾಥ್ ಕಾರಿನಿಂದ ಇಳಿಯದ ಪ್ರಸಂಗವು ನಡೆದಿದೆ. ಪೊಲೀಸರು ಬಂದರೂ ಇಳಿಯದೇ ಕಾರಿನಲ್ಲೇ ಚಾಲಕ ಹರಿನಾಥ್ ಕುಳಿತ್ತಿದ್ದರು. ಕೊನೆಗೆ ಪೊಲೀಸರೇ ಮನವೊಲಿಸಿ ಕಾರಿನಿಂದ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ಆಟೋ ರಿಕ್ಷಾ ಸಹ ಜಖಂಗೊಂಡಿದೆ. ಸದ್ಯ ಕಾರು, ಆಟೋ ಹಾಗೂ ಬೈಕ್ ವಶಕ್ಕೆ ಪಡೆದಿರುವುದಾಗಿ ಮಲ್ಲೇಶ್ವರಂ ಸಂಚಾರಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News