ಬೆಂಗಳೂರು | ಪೊಲೀಸ್ ಸೋಗಿನಲ್ಲಿ ಮಸಾಜ್ ಥೆರಪಿಸ್ಟ್‌ಗೆ ಬೆದರಿಕೆ : ಆರೋಪಿ ಬಂಧನ

Update: 2024-07-22 16:22 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಪೊಲೀಸ್ ಸೋಗಿನಲ್ಲಿ ಮಹಿಳಾ ಮಸಾಜ್ ಥೆರಪಿಸ್ಟ್‌ ವೊಬ್ಬರನ್ನು ಬೆದರಿಸಿ 1.5 ಲಕ್ಷ ರೂ. ಸುಲಿಗೆ ಮಾಡಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಮಹೇಂದ್ರ ಕುಮಾರ್ ಯಾನೆ ಕಾರ್ತಿಕ್(33) ಎಂದು ಗುರುತಿಸಲಾಗಿದೆ. ಈತ ಮಸಾಜ್‍ಗಾಗಿ ಆನ್‍ಲೈನ್‍ನಲ್ಲಿ ಮಹಿಳಾ ಥೆರಪಿಸ್ಟ್‌ ಗಳನ್ನು ಬುಕ್ ಮಾಡಿ, ನಂತರ ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ಜು.3ರಂದು ಸುರೇಶ್ ಎಂಬ ಹೆಸರಿನಲ್ಲಿ ಮಸಾಜ್ ಸ್ಲಾಟ್ ಬುಕ್ ಮಾಡಿದ್ದ. ಅಲ್ಲದೆ, ತಾನೊಬ್ಬ ನಟ ಎಂದು ನಮೂದಿಸಿ, ರಾಮಮೂರ್ತಿ ನಗರದ ಅಪಾರ್ಟ್‍ಮೆಂಟ್‍ವೊಂದರ ವಿಳಾಸ ನೀಡಿ 25 ವರ್ಷದ ಥೆರಪಿಸ್ಟ್‌ ಒಬ್ಬರನ್ನು ಬುಕ್ ಮಾಡಿದ್ದ. ಆರೋಪಿಯ ಸಂಚು ತಿಳಿಯದ ಮಹಿಳಾ ಥೆರಪಿಸ್ಟ್ ರಾತ್ರಿ 10.30ರ ಸುಮಾರಿಗೆ ಆತನ ವಿಳಾಸಕ್ಕೆ ಬಂದಿದ್ದರು.

ಬಳಿಕ ಥೆರಪಿಸ್ಟ್‌ ಗಳನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿ, 1 ಕಿ.ಮೀ. ಪ್ರಯಾಣಿಸಿದ ಬಳಿಕ, ‘ತಾನೊಬ್ಬ ಪೊಲೀಸ್ ಅಧಿಕಾರಿ, ನೀವು ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ಸುಳ್ಳು ಪ್ರಕರಣ ದಾಖಲಿಸುತ್ತೇನೆ' ಎಂದು ಬೆದರಿಸಿದ್ದ. ಅಲ್ಲದೆ, ಆಕೆಯ ಮೇಲೆ ಹಲ್ಲೆ ಮಾಡಿ 10 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಬರಿಗೊಂಡಿದ್ದ ಯುವತಿ, ತನ್ನ ಸ್ನೇಹಿತನಿಗೆ ಕರೆ ಮಾಡಿ ಆತನ ಮೂಲಕ ಆರೋಪಿ ಹೇಳಿದ ನಂಬರ್‌ ಗೆ 1 ಲಕ್ಷ ರೂ. ವರ್ಗಾಯಿಸಿದ್ದಳು. ಬಳಿಕ ಪುನಃ 50 ಸಾವಿರ ರೂ.ಗಳನ್ನು ಮತ್ತೊಂದು ನಂಬರ್‌ ಗೆ ಹಣ ವರ್ಗಾಯಿಸಿಕೊಂಡಿದ್ದ ಆರೋಪಿ, ಆಕೆಯನ್ನು ಇಡೀ ರಾತ್ರಿ ಕಾರಿನಲ್ಲಿ ಹೆಬ್ಬಾಳ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದ. ನಂತರ ಬೆಳಗಿನ ಜಾವ ಏರ್‌ ಪೋರ್ಟ್ ಬಳಿ ಇಳಿಸಿ, ‘ಈ ವಿಚಾರವನ್ನು ಯಾರಿಗೂ ಹೇಳಬಾರದು, ನೀನು ಸ್ವಂತ ಊರಿಗೆ ಹೋಗು' ಎಂದು ಬೆದರಿಕೆ ಹಾಕಿ ತೆರಳಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಆರೋಪಿಯ ಹೆಸರು ಸುರೇಶ್ ಅಲ್ಲ, ಮಹೇಂದ್ರ ಕುಮಾರ್ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಯು ಮಾರತ್‍ಹಳ್ಳಿ, ಹೆಣ್ಣೂರು, ಪುಲಿಕೇಶಿನಗರ ಸೇರಿದಂತೆ ಹಲವೆಡೆ ಇದೇ ರೀತಿ ವಂಚಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News