ಬೆಂಗಳೂರು | ಕಾರು ಹರಿದು ಬಾಲಕ ಮೃತ್ಯು

Update: 2024-05-12 13:18 GMT

ಬೆಂಗಳೂರು : ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಯುವಕನ ನಿರ್ಲಕ್ಷ್ಯಕ್ಕೆ ಐದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್‍ನಲ್ಲಿ ವರದಿಯಾಗಿದೆ.

ಆರವ್(5) ಮೃತ ಬಾಲಕ ಎಂದು ಗೊತ್ತಾಗಿದ್ದು, ದೇವರಾಜ್(18) ಎಂಬಾತನೇ ಕಾರು ಚಲಾಯಿಸಿದ ಆರೋಪಿ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 12ರ ರವಿವಾರ ಬೆಳಗ್ಗೆ ಯುವಕನ ಕುಟುಂಬ ಬಾಡಿಗೆ ಕಾರಲ್ಲಿ ರೆಸಿಡೆನ್ಶಿಯಲ್ ಏರಿಯಾದ ಬಳಿ ಬಂದಿತ್ತು. ಈ ವೇಳೆ ತಂದೆ ತನ್ನ ಮಗನಿಗೆ ಕಾರನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು. ಆದರೆ, ಯುವಕ ಚಾಲಕನ ಸೀಟಲ್ಲಿ ಕುಳಿತು ಎಕ್ಸಲೆಟರ್ ತುಳಿದಿದ್ದಾನೆ. ಇದರಿಂದ ಮುಂದೆ ಚಲಿಸಿದ ಕಾರು ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಬಳಿಕ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿ ಆತನ ಮೇಲೆ ಹರಿದಿದೆ. ಪರಿಣಾಮ ಬಾಲಕ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಜೀವನ್ ಭೀಮಾನಗರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಲಾಯಿಸಿದ್ದ ಆರೋಪಿ ಯುವಕನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News