ಬೆಂಗಳೂರು | ಮಾರಕಾಸ್ತ್ರಗಳನ್ನು ಹಿಡಿದು ಡೆಲಿವರಿ ಬಾಯ್‍ಗಳಿಗೆ ಬೆದರಿಕೆ ಪ್ರಕರಣ : ಮೂವರ ಬಂಧನ

Update: 2024-09-02 15:26 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಾರಕಾಸ್ತ್ರಗಳ ಹಿಡಿದು ಡೆಲಿವರಿ ಬಾಯ್‍ಗಳನ್ನು ಬೆದರಿಸಿ, ರಾಬರಿ ಮಾಡುತ್ತಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಜೀವನ್ ಭೀಮಾ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಎಚ್‍ಎಎಲ್‍ನ ವಿಭೂತಿಪುರದ ಭರತ್, ವಿಘ್ನೇಶ್ ಹಾಗೂ ಜೋಯಲ್ ಅಭಿಷೇಕ್ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ.

ವಿವಿಧ ಕಂಪೆನಿಗಳ ಡೆಲಿವರಿ ಬಾಯ್‍ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಮಾರಕಾಸ್ತ್ರಗಳನ್ನು ಹಿಡಿದು ಅಡ್ಡಗಟ್ಟುತ್ತಿದ್ದರು. ಬಳಿಕ ಬೆದರಿಸಿ ಅವರ ಬಳಿಯಿರುವ ಊಟ, ತಿಂಡಿ, ವಸ್ತುಗಳು, ದ್ವಿಚಕ್ರ ವಾಹನವನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಇದೇ ರೀತಿ ಆಗಸ್ಟ್ 4 ಮತ್ತು 21ರಂದು ಎಚ್‍ಎಎಲ್‍ನ ಕೋನೇನ ಅಗ್ರಹಾರದಲ್ಲಿ ತಲ್ವಾರ್ ಹಿಡಿದು ಡೆಲಿವರಿ ಬಾಯ್‍ಗಳನ್ನು ದೋಚಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜೀವನ ಭೀಮಾ ನಗರ ಠಾಣೆ ಪೊಲೀಸರು, ಮೊದಲು ಡೆಲಿವರಿ ಬಾಯ್‍ನನ್ನು ಪತ್ತೆ ಹಚ್ಚಿದ್ದರು. ಆತನಿಂದ ದೂರು ಪಡೆದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಹೇಳಿದ್ದಾರೆ.

ಆರೋಪಿಗಳು ಮಾರತ್ತಹಳ್ಳಿ, ಕೆ.ಆರ್.ಪುರಂ ಸೇರಿದಂತೆ ಹಲವು ಕಡೆಗಳಲ್ಲಿ ತಲ್ವಾರ್ ತೋರಿಸಿ ದೋಚಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಬಂಧಿತರಿಂದ ನಾಲ್ಕು ದ್ವಿಚಕ್ರ ವಾಹನಗಳು, ತಲ್ವಾರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News